ADVERTISEMENT

ವಿಚಾರ ಗ್ರಹಿಕೆಗೆ ಅಂಬೇಡ್ಕರ್ ಪುಸ್ತಕ ಓದಿ: ಕುಲಪತಿ ಬಿ.ರಮೇಶ್‌

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 15:59 IST
Last Updated 16 ಡಿಸೆಂಬರ್ 2025, 15:59 IST
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್‌ ಅವರ ಸಮಗ್ರ ಆಧುನಿಕ ಚಿಂತನೆಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಕುಲ‍ಪತಿ ಡಾ.ಎಸ್‌.ಎಂ.ಜಯಕರ ಮಾತನಾಡಿದರು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್‌ ಅವರ ಸಮಗ್ರ ಆಧುನಿಕ ಚಿಂತನೆಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಕುಲ‍ಪತಿ ಡಾ.ಎಸ್‌.ಎಂ.ಜಯಕರ ಮಾತನಾಡಿದರು.   

ಬೆಂಗಳೂರು: ‘ಡಾ.ಬಿ.ಆರ್.ಅಂಬೇಡ್ಕರ್‌ ಅವರ ವಿಚಾರಗಳನ್ನು ಯುವಪೀಳಿಗೆ ವೈಜ್ಞಾನಿಕವಾಗಿ ಗ್ರಹಿಸಲು ಪುಸ್ತಕಗಳ ನಿರಂತರ ಅಧ್ಯಯನ ಮಾಡಬೇಕು. ಇದರಿಂದ ಮಾತ್ರ ಅವರ ನಿರೀಕ್ಷೆಗಳನ್ನು ಪೂರ್ಣಗೊಳಿಸಲು ಸಾಧ್ಯ’ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಬಿ.ರಮೇಶ್‌ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಸಂಶೋಧನಾ ತರಬೇತಿ ಹಾಗೂ ವಿಸ್ತರಣಾ ಕೇಂದ್ರ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸಹಯೋಗದಲ್ಲಿ ಜ್ಞಾನಭಾರತಿಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್‌ ಅವರ ಸಮಗ್ರ ಆಧುನಿಕ ಚಿಂತನೆಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು‌.

‘ಬಾಬಾಸಾಹೇಬರ ಎಲ್ಲಾ ಹೋರಾಟಗಳು ಸಮಸ್ಯೆ ಮೂಲವನ್ನು ಪ್ರಶ್ನಿಸಿದ್ದವು. ಆ ಚಿಂತನೆಯಲ್ಲೇ ದಲಿತ, ರೈತ, ವಿದ್ಯಾರ್ಥಿ ಚಳವಳಿಗಳು ಹುಟ್ಟಿಕೊಂಡವು. ಭಾರತದ ಸಂವಿಧಾನ ಇಂದು ಇಕ್ಕಟ್ಟಿನಲ್ಲಿ ಸಿಲುಕಿದೆ. ಸ್ವಾತಂತ್ರ್ಯ ಪಡೆದು 75 ವರ್ಷ ಕಳೆದರೂ ವಸಹಾತುಶಾಹಿ ದೂರವಾಗಿಲ್ಲ. ಮನುವಾದ ಉಚ್ಛ್ರಾಯ ಸ್ಥಿತಿ ತಲುಪಿದೆ.  ವಿದ್ಯಾರ್ಥಿಗಳು ಅಂಬೇಡ್ಕರ್‌ ಅವರ ಕುರಿತು ಅಧ್ಯಯನ ನಡೆಸಿದರೆ ಇವುಗಳಿಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ಸಲಹೆ ನೀಡಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಎಂ.ಜಯಕರ ಮಾತ‌ನಾಡಿ, ‘ಅಂಬೇಡ್ಕರ್‌ ಅವರ ಚಿಂತನೆಗಳನ್ನು ಎಲ್ಲಾ ಆಯಾಮದಲ್ಲೂ ಅಧ್ಯಯನಕ್ಕೆ ಒಳಪಡಿಸಬೇಕು. ಯುವಪೀಳಿಗೆ ಅವರ ದೂರದೃಷ್ಟಿ ಚಿಂತನೆಗಳನ್ನು ಅರ್ಥೈಸಿಕೊಳ್ಳಬೇಕು’ ಎಂದರು.

ಮೈಸೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಿರ್ದೇಶಕ ಸಿ.ಸೋಮಶೇಖರ್ ಮಾತನಾಡಿ, ‘ವಿಶ್ವವಿದ್ಯಾಲಯ ಮಟ್ಟದಲ್ಲಿ ಅಂಬೇಡ್ಕರ್‌ ಕುರಿತಾದ ಸಂಶೋಧನೆ ಮತ್ತು ಅಧ್ಯಯನ ಸಮಗ್ರವಾಗಿ ನಡೆಯಲು ಕೇಂದ್ರಗಳಿಗೆ ಪೂರ್ಣಕಾಲಿಕ ನಿರ್ದೇಶಕರನ್ನು ನೇಮಿಸಬೇಕು’ ಎಂದರು.

ಅಂಬೇಡ್ಕರ್ ಸಂಶೋಧನಾ ತರಬೇತಿ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಸಾಬೀರ್ ಅಹನದ್ ಮುಲ್ಲಾ, ಜನಪದ‌ ಕಲಾವಿದ ಅಪ್ಪಗೆರೆ ತಿಮ್ಮರಾಜು, ಪ್ರಾಧ್ಯಾಪಕ ಎಚ್. ವಿಶ್ವನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.