ADVERTISEMENT

ಕೇಳಿದಷ್ಟು ಹಣ ಕೊಡಲಿಲ್ಲವೆಂದು ಶವವನ್ನು ಮಾರ್ಗಮಧ್ಯೆಯೇ ಇರಿಸಿದ ಆಂಬುಲೆನ್ಸ್ ಚಾಲಕ

​ಪ್ರಜಾವಾಣಿ ವಾರ್ತೆ
Published 28 ಮೇ 2021, 17:09 IST
Last Updated 28 ಮೇ 2021, 17:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೇಳಿದಷ್ಟು ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಕೋವಿಡ್ ರೋಗಿಯ ಮೃತದೇಹವನ್ನು ಪಾದಚಾರಿ ಮಾರ್ಗದಲ್ಲಿ ಇರಿಸಿಹೋಗಿದ್ದ ಆರೋಪದಡಿ ಆಂಬುಲೆನ್ಸ್ ಚಾಲಕ ಶರತ್‌ ಗೌಡ ಎಂಬಾತನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಹೆಬ್ಬಾಳ ಚಿತಾಗಾರದ ನಿರ್ವಹಣೆ ಅಧಿಕಾರಿ ಸತೀಶ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆಂಬುಲೆನ್ಸ್‌ನಲ್ಲಿದ್ದ ಇನ್ನೊಬ್ಬ ಆರೋಪಿ ನಾಗೇಶ್ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

’ಅನುಜ್ ಸಿಂಗ್ ಎಂಬುವರು ಕೊರೊನಾ ಸೋಂಕಿನಿಂದಾಗಿ ಜಯದೇವ ಆಸ್ಪತ್ರೆಯಲ್ಲಿ ಮೇ 24ರಂದು ಮೃತಪಟ್ಟಿದ್ದರು. ಮೃತದೇಹವನ್ನು ಹೆಬ್ಬಾಳದ ಚಿತಾಗಾರಕ್ಕೆ ಸಾಗಿಸಲು ಕುಟುಂಬಸ್ಥರು ಮುಂದಾಗಿದ್ದರು. ₹ 18 ಸಾವಿರ ಕೊಟ್ಟರೆ ಮೃತದೇಹವನ್ನು ಚಿತಾಗಾರಕ್ಕೆ ತೆಗೆದುಕೊಂಡು ಹೋಗುವುದಾಗಿ ಚಾಲಕ ಶರತ್‌ ಗೌಡ ಹೇಳಿದ್ದ.’

ADVERTISEMENT

‘₹ 18 ಸಾವಿರ ಇಲ್ಲವೆಂದು ಹೇಳಿದ್ದ ಮೃತನ ಪತ್ನಿ, ₹ 3 ಸಾವಿರ ಹೊಂದಿಸಿ ಚಾಲಕನಿಗೆ ಕೊಟ್ಟಿದ್ದರು. ಮೃತದೇಹವನ್ನು ಹೆಬ್ಬಾಳ ಚಿತಾಗಾರ ಬಳಿ ತಂದಿದ್ದ ಆರೋಪಿ, ಉಳಿದ ಹಣ ಕೇಳಿದ್ದ. ಹಣವಿಲ್ಲವೆಂದು ಮೃತನ ಪತ್ನಿ ಹೇಳುತ್ತಿದ್ದಂತೆ, ಮೃತದೇಹವನ್ನು ಪಾದಚಾರಿ ಮಾರ್ಗದಲ್ಲೇ ಇಳಿಸಿ ಹೋಗಿದ್ದ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.