ADVERTISEMENT

Bengaluru | ಬೆಂಗಳೂರು ನಾಗರಿಕರ ರಕ್ಷಣೆಗೆ ಬದ್ಧ: ಅಮಿತ್‌ ಶಾ

ಆಧುನಿಕ ತಂತ್ರಜ್ಞಾನ ಬಳಕೆಯಲ್ಲೂ ಮುಂದು l ‘ಸೇಫ್‌ ಸಿಟಿ’ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 22:45 IST
Last Updated 3 ಮಾರ್ಚ್ 2023, 22:45 IST
ಬೆಂಗಳೂರು ಸುರಕ್ಷಿತ ನಗರ ಯೋಜನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು. ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಶಾಸಕ ಉದಯ ಗರುಡಾಚಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಂಸದ ತೇಜಸ್ವಿ ಸೂರ್ಯ ಇದ್ದರು - - – ಪ್ರಜಾವಾಣಿ ಚಿತ್ರ
ಬೆಂಗಳೂರು ಸುರಕ್ಷಿತ ನಗರ ಯೋಜನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು. ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಶಾಸಕ ಉದಯ ಗರುಡಾಚಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಂಸದ ತೇಜಸ್ವಿ ಸೂರ್ಯ ಇದ್ದರು - - – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘2024ರಲ್ಲಿ ಭಾರತದ ಪೊಲೀಸ್‌ ವ್ಯವಸ್ಥೆ ವಿಶ್ವದ ಅತಿ ದೊಡ್ಡ ಪೊಲೀಸ್‌ ವ್ಯವಸ್ಥೆಯಾಗಿ ಪರಿವರ್ತನೆ
ಗೊಳ್ಳಲಿದ್ದು, ಅದಕ್ಕೆ ತಕ್ಕಂತೆ ತಂತ್ರಜ್ಞಾನವೂ ಸೇರಿ ಎಲ್ಲ ರೀತಿಯ ವ್ಯವಸ್ಥೆಗಳನ್ನೂ ಮಾಡಿಕೊಳ್ಳಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

ಸುರಕ್ಷಿತ ಬೆಂಗಳೂರಿಗಾಗಿ ಮತ್ತು ಮಹಿಳಾ ಸುರಕ್ಷತೆಗಾಗಿ ₹667ಕೋಟಿ ವೆಚ್ಚದ ‘ಸೇಫ್‌ ಸಿಟಿ’ ಮೊದಲ ಹಂತವನ್ನು ನಗರದ ಪುರಭವನದಲ್ಲಿ ಶುಕ್ರವಾರ ರಾತ್ರಿ ಅವರು ಉದ್ಘಾಟಿಸಿ ಮಾತನಾಡಿದರು.

‘ಪೊಲೀಸರು ಅತ್ಯಂತ ತ್ವರಿತಗತಿಯಲ್ಲಿ ಅಪರಾಧವನ್ನು ತಡೆಯಲು ಮತ್ತು ಅಪರಾಧ ನಡೆದ ಸ್ಥಳವನ್ನು ತಲುಪಲು ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು. ಮಾದಕವಸ್ತುಗಳುಯಾವುದೇ ಮೂಲಗಳಿಂದಲಾದರೂಬರಬಹುದು. ಇದರ ಮೇಲೆ ಕಣ್ಣಿಡಲು ತಂತ್ರಜ್ಞಾನ ಬಳಕೆ ಆಗಬೇಕು. ವಿಧಿವಿಜ್ಞಾನ ರಾಷ್ಟ್ರ ಮಟ್ಟದಲ್ಲಿ ಜಾಲವನ್ನು ರೂಪಿಸಬೇಕು. ಸೈಬರ್‌ ಜಾಗೃತಿಯನ್ನು ಯುವ ಜನತೆಯಲ್ಲಿ ಮೂಡಿಸಬೇಕಾಗಿದೆ’ ಎಂದರು.

ADVERTISEMENT

‘ಮೋದಿ ಅವರು ಪ್ರಧಾನಿ ಆದ ಬಳಿಕ ದೇಶ ವ್ಯಾಪಿ ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಆಧುನೀಕರಿಸುವ ಕೆಲಸ ನಡೆಯುತ್ತಿದೆ. ದೇಶದ ಶೇ 99ರಷ್ಟು ಠಾಣೆಗಳಲ್ಲಿ ಆನ್‌ಲೈನ್‌ ವ್ಯವಸ್ಥೆ ಜಾರಿಯಲ್ಲಿದೆ’ ಎಂದರು.

‘ನಗರದಲ್ಲಿ 7,000ಕ್ಕೂ ಹೆಚ್ಚು ಕಡೆಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಮಾಂಡ್‌ ಸೆಂಟರ್‌ ಕೂಡ ಉತ್ತಮವಾಗಿ ಕೆಲಸ ಮಾಡಲಿದೆ. ಕಮಾಂಡ್‌ ಸೆಂಟರ್‌ ಜತೆ ಚೆನ್ನಮ್ಮಾ ಪಡೆ ಹೆಚ್ಚು ಸಂವೇದಾನಶೀಲವಾಗಿ
ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಸಂಯುಕ್ತ ಕಮಾಂಡ್‌ ಕಂಟ್ರೋಲ್ ಸೆಂಟರ್‌ ಸ್ಥಾಪಿಸಲಾಗಿದೆ. ಇದರ ಜೊತೆ 112 ಹೊಯ್ಸಳ ವಾಹನಗಳನ್ನು ನಿಯೋಜಿಸಲಾಗಿದೆ’ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ನಾನು ಗೃಹ ಸಚಿವನಾಗಿದ್ದಾಗ ಮಾಮೂಲಿ ಕ್ಯಾಮೆರಾ ಅಳವಡಿಸುವ ಬದಲಿಗೆ ಆರ್ಟಿಫಿಷಿಯಲ್‌ ತಂತ್ರಜ್ಞಾನ ಹೊಂದಿರುವ ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಈಗ ಬೆಂಗಳೂರಿನಲ್ಲಿ ಎಲ್ಲರ ಮೇಲೂ ವಿಶೇಷವಾಗಿ ಕ್ರಿಮಿನಲ್‌ಗಳ ಮೇಲೆ ಕ್ಯಾಮೆರಾಗಳು ಕಣ್ಣಿಟ್ಟಿವೆ. ಇದರಿಂದಾಗಿ ಅಪರಾಧ ಪ್ರಮಾಣ ಕಡಿಮೆಯಾಗಿದೆ. ಮಹಿಳಾ ರಕ್ಷಣೆ ನಮ್ಮ ಮೊದಲ ಆದ್ಯತೆ. ನಮ್ಮ ಪೊಲೀಸರ ಮೇಲಿನ ನಂಬಿಕೆಯಿಂದ ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ ಮಾಡುವ ಅವಕಾಶವನ್ನು ಕಾನೂನಿನಲ್ಲಿ ನೀಡಲಾಗಿದೆ’ ಎಂದರು.

ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ‘ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ, ಸುರಕ್ಷತೆ ಉದ್ದೇಶದಿಂದ ಸೇಫ್‌ ಸಿಟಿ ಯೋಜನೆ ರೂಪಿಸಲಾಗಿದೆ. ಇದು ಇತರೆ ರಾಜ್ಯಗಳಿಗೆ ಮಾದರಿಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.