
ಸಿದ್ಧಲಿಂಗ ಸ್ವಾಮೀಜಿ, ಪಾರ್ವತಮ್ಮ ಪಂಡಿತ್, ಶಿವರುದ್ರ ಸ್ವಾಮೀಜಿ, ವಿಶ್ವಬಂಧು ಸೇವಾ ಪ್ರತಿಷ್ಠಾನದ ಸಿದ್ದಯ್ಯ ಗುರುಗಳು, ನಾರಸಂದ್ರ ಮಠದ ಸಿದ್ಧಲಿಂಗ ಸ್ವಾಮೀಜಿ, ಎಚ್.ಎಲ್. ಪುಷ್ಪ, ಸಿ. ಸೋಮಶೇಖರ, ಎಸ್. ಪಿನಾಕಪಾಣಿ, ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ್, ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರ.ದೇ. ಪಾರ್ಶ್ವನಾಥ್, ಗಾಯಕ ದೇವೇಂದ್ರಕುಮಾರ ಪತ್ತಾರ್
ಬೆಂಗಳೂರು: ‘ಪ್ರೀತಿಯ ಕೊರತೆಯಿಂದ ಅನಾಥ ಪ್ರಜ್ಞೆಯಿಂದ ಬಳಲುವ ಜನರ ಸಂಖ್ಯೆ ದೊಡ್ಡದಾಗಿರುವಾಗ, ಅತ್ಯಂತ ಪ್ರೀತಿಯಿಂದ ತಾಯಿಯನ್ನು ನೋಡಿಕೊಳ್ಳುವುದು ಆದರ್ಶ ಕಾರ್ಯ. ಬದುಕಿರುವಾಗಲೇ ತಾಯಿಯನ್ನು ಗೌರವಿಸಬೇಕು’ ಎಂದು ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ವಚನಜ್ಯೋತಿ ಬಳಗ ಆಯೋಜಿಸಿದ್ದ ‘ಅಮ್ಮ–90’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಬದುಕಿನಲ್ಲಿ ತಾಯಿಯ ಸ್ಥಾನ ಬಹು ದೊಡ್ಡದು. ನಮಗೆ ಎಲ್ಲವನ್ನೂ ಕೊಟ್ಟಿರುವ ತಾಯಿಯನ್ನು ಬದುಕಿರುವಾಗಲೇ ಗೌರವಿಸಬೇಕು. ಈ ನಿಟ್ಟಿನಲ್ಲಿ ‘ಅಮ್ಮಾ ತೊಂಬತ್ತು’ ಕಾರ್ಯಕ್ರಮ ಎಲ್ಲರಿಗೂ ಮಾದರಿ ಆಗಿದ್ದು, ಎಲ್ಲರೂ ಅನುಸರಿಸಬೇಕು’ ಎಂದು ಸಲಹೆ ನೀಡಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಮಾತನಾಡಿ, ‘ಕೌಟುಂಬಿಕ ಕಾರ್ಯವನ್ನು ಸಾಂಸ್ಕೃತಿಕ ಉತ್ಸವವನ್ನಾಗಿ ರೂಪಿಸಿರುವ ‘ಅಮ್ಮಾ ತೊಂಬತ್ತು’ ವಿಶಿಷ್ಟ ಕಾರ್ಯಕ್ರಮವಾಗಿದ್ದು, ತಾಯಿಯನ್ನು ಗೌರವಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ’ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್ ಮಾತನಾಡಿ ‘ವಚನಗಳನ್ನು ಆಧಾರವಾಗಿಟ್ಟುಕೊಂಡು ನಿರಂತರ ಚಟುಟಿಕೆಗಳನ್ನು ನಡೆಸುವ ವಚನಜ್ಯೋತಿ ಬಳಗವು ಇಂದು ಮತ್ತೊಂದು ವಿಶೇಷಕ್ಕೆ ಕಾರಣವಾಗಿದೆ. ಮೇಲಿನ ಲೋಕಕ್ಕೆ ಹೋದಾಗ ಅವರ ಹೆಸರಿನಲ್ಲಿ ಸ್ಮರಣೆ ನಡೆಸಿ ಊಟೋಪಚಾರ ಮಾಡುವುದಕ್ಕಿಂತ ಅಮ್ಮ ಬದುಕಿದ್ದಾಗಲೇ ಅವಳಿಗೆ ಹೂಮಳೆ ಹರಿಸಿ ಊಟೋಪಚಾರ ನಡೆಸುವುದು ಒಳ್ಳೆಯ ಕೆಲಸ’ ಎಂದರು.
ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಮಾತನಾಡಿ, ‘ಅತ್ಯಂತ ಸಂಕಷ್ಟಗಳನ್ನು ಎದುರಿಸಿ ನೋವಿನ ಅಲೆಯಲಿ ತೇಲಿ ಮುಳುಗಿದ್ದರೂ, ಮಕ್ಕಳನ್ನು ಜತನದಿಂದ ಕಾಪಾಡಿಕೊಂಡು ಬೆಳೆಸಿದ ತಾಯಿಯನ್ನು ಅವಳ ಕಣ್ಣು ಮುಂದೆಯೇ ಸತ್ಕರಿಸಿ ಗೌರವಿಸುವುದು ಬಹು ಮುಖ್ಯವಾಗಿದೆ. ಹಾಗಾಗಿಯೇ ವಚನಜ್ಯೋತಿ ಬಳಗ ಅಮ್ಮಾ ಎಂಬತ್ತನ್ನು ಹತ್ತು ವರ್ಷದ ಹಿಂದೆ ಆಚರಿಸಿತ್ತು. ಇದೀಗ ಅಮ್ಮಾ ತೊಂಬತ್ತನ್ನು ನಾಡಿನ ಪ್ರತಿಭಾವಂತ ಗಾಯಕರ ಗೀತ, ಗಾಯನದಿಂದ ಆಚರಿಸುತ್ತಿದೆ’ ಎಂದು ತಿಳಿಸಿದರು.
ಬೇಲಿಮಠದ ಶಿವರುದ್ರಸ್ವಾಮೀಜಿ, ಸಾಹಿತಿ ವಸುಧೇಂದ್ರ, ಗಾಯಕರಾದ ದೇವೇಂದ್ರಕುಮಾರ ಪತ್ತಾರ್, ರವೀಂದ್ರ ಸೊರಗಾವಿ, ಸಿದ್ಧರಾಮ ಕೇಸಾಪುರ, ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಶ್ವೇತಾ ಪ್ರಭು, ನಾಗಚಂದ್ರಿಕಾ ಭಟ್, ಅಮರೇಶ ಗವಾಯಿ, ಪ್ರಭಾ ಇನಾಂದಾರ್, ಈರಯ್ಯ ಚಿಕ್ಕಮಠ್, ಚೇತನಾ ಮುಧೋಳ್, ಗೀತಾ ಭತ್ತದ್, ಸುನೀತ ಗಂಗಾವತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.