ಸಾಂದರ್ಭಿಕ ಚಿತ್ರ
–ಪ್ರಜಾವಾಣಿ ಚಿತ್ರ
ಪ್ರಜಾವಾಣಿ ವಾರ್ತೆ
ಬೆಂಗಳೂರು: ನಿವೃತ್ತರಾದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರಾಚ್ಯುಟಿ ನೀಡುವಂತೆ ಆಗ್ರಹಿಸಿ ಮೇ 17ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ತಿಳಿಸಿದೆ.
ಎಐಟಿಯುಸಿ–ಟಿಯುಸಿಸಿ–ಎಐಯುಟಿಯುಸಿ ನೇತೃತ್ವದಲ್ಲಿ ಬುಧವಾರ ನಡೆದ ಅಂಗನವಾಡಿ ಸಂಘಟನೆಗಳ ಜಂಟಿ ಸಮಾವೇಶದಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.
‘2011–12ನೇ ಸಾಲಿನಲ್ಲಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪೈಕಿ ಈಗಾಗಲೇ ಬಹಳಷ್ಟು ಜನ ಮೃತಪಟ್ಟಿದ್ದಾರೆ. ಸುಮಾರು 20 ಸಾವಿರ ವಯೋವೃದ್ಧರು ಯಾವುದೇ ಆರ್ಥಿಕ ಆಸರೆ ಇಲ್ಲದೇ ದಯನೀಯವಾದ ಬದುಕು ನಡೆಸುತ್ತಿದ್ದಾರೆ. ಆದ್ದರಿಂದ ಇವರೆಲ್ಲರಿಗೂ ಗ್ರಾಚ್ಯುಟಿ ಬಿಡುಗಡೆಗೊಳಿಸಬೇಕು. ಆದರೆ, ಸರ್ಕಾರ ಇದನ್ನು ಪರಿಗಣಿಸದೇ 2023ರಿಂದ ಗ್ರಾಚ್ಯುಟಿ ಜಾರಿಗೊಳಿಸಿ ಕೈ ತೊಳೆದುಕೊಳ್ಳುವ ಕ್ರಮ ಸರಿಯಲ್ಲ’ ಎಂದು ಒಕ್ಕೂಟದ ಜಿ.ಆರ್. ಶಿವಶಂಕರ್, ನಾಗರತ್ನಮ್ಮ, ಬಿ. ಅಮ್ಜದ್, ಎಂ. ಜಯಮ್ಮ, ಎಂ. ಉಮಾದೇವಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.