ಬೆಂಗಳೂರು: ‘ಪೋಷಕರು ತಮ್ಮ ಈಡೇರದ ಕನಸುಗಳನ್ನು ಮಕ್ಕಳ ಮೇಲೆ ಹೇರಬೇಡಿ, ಇದರಿಂದ ಅವರು ಒತ್ತಡಕ್ಕೆ ಒಳಗಾಗಿ ಅಡ್ಡದಾರಿ ಹಿಡಿಯುವ ಅಪಾಯವಿದೆ’ ಎಂದು ಸಿಎಡಿಎಬಿಎಎಂಎಸ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಬಿ.ಆರ್.ಮಧುಕರ್ ತಿಳಿಸಿದರು.
ನಗರದ ಶಂಕರಪುರ ರಾಯರಾಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಜೋಡಿಗುಬ್ಬಿ ವಿಪ್ರವೃಂದದ 9ನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ‘ಮಕ್ಕಳಿಗೂ ತಮ್ಮದೇ ಆದ ಕನಸುಗಳಿರುತ್ತವೆ ಮತ್ತು ಪ್ರತಿಭೆ ಇರುತ್ತದೆ. ಅವುಗಳ ಕುರಿತು ಪೋಷಕರು ಗಮನ ಹರಿಸಬೇಕು' ಎಂದರು.
ವಿಪ್ರ ವೃಂದದ ಅಧ್ಯಕ್ಷ ಜಿ.ಎನ್.ರಾಮಚಂದ್ರ, ‘ಜೋಡಿ ಗುಬ್ಬಿ ವಿಪ್ರವೃಂದವು 9 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಬಳಗದ ಸದಸ್ಯರ ಭಾವನೆಗಳಿಗೆ ಸ್ಪಂದಿಸುತ್ತಿದೆ. ಮುಂದಿನ ವರ್ಷ ದಶಮಾನೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆದಿದ್ದು ಸದಸ್ಯರ ಸಹಕಾರ ಅಗತ್ಯ’ ಎಂದರು.
ಬಳಗದ ಕಾರ್ಯದರ್ಶಿ ಜಿ.ವಿ. ವೆಂಕಟಸುಬ್ಬಯ್ಯ, ಉಪಾಧ್ಯಕ್ಷರಾದ ಎನ್.ಶ್ಯಾಮಸುಂದರ್, ಶೈಲಜಾ, ಪದಾಧಿಕಾರಿಗಳಾದ ನಾಗು ಪ್ರವೀಣ್, ಸತ್ಯವತಿ, ವೈಭವಿ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 2020ರ ಕ್ಯಾಲೆಂಡರ್ ಹಾಗೂ ಬಳಗದ ವಾರ್ಷಿಕ ಸಂಚಿಕೆ ‘ನನ್ನೂರು ಹೊನ್ನೂರು’ ಬಿಡುಗಡೆ ಮಾಡಲಾಯಿತು. ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಿರಿಯ ದಂಪತಿ ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಬಳಗದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.