ಬೆಂಗಳೂರು: ‘ಇಂದು ದೇಶದಲ್ಲಿ ಬ್ಯಾಂಕ್ಗಳೇ ಮುಚ್ಚಿ ಹೋಗುತ್ತಿವೆ. ಇಂಥ ಸಂದರ್ಭದಲ್ಲಿ ಬೆಂಗಳೂರು ವಕೀಲರ ಸಹಕಾರ ಸಂಘ ನ್ಯಾಯ ಮಿತ್ರ ಬ್ಯಾಂಕ್ ಮೂಲಕ ವಕೀಲರಿಗೆ ಆರ್ಥಿಕ ನೆರವು ಕಲ್ಪಿಸಿ, ಎತ್ತರಕ್ಕೆ ಬೆಳೆದಿರುವುದು ಅನುಕರಣೀಯ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೋಹನ ಶಾಂತನಗೌಡರ ಅವರು ಶ್ಲಾಘಿಸಿದರು.
ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಶುಕ್ರವಾರ ಬೆಂಗಳೂರು ವಕೀಲರ ಸಹಕಾರ ಸಂಘದ ಅಮೃತ ಮಹೋತ್ಸವ ಸಮಾರೋಪದಲ್ಲಿ ಮಾತನಾಡಿದರು.
‘ಸಂಘದ ಕಚೇರಿಗೆ 1984 ಮತ್ತು 1994ರಲ್ಲಿ ಬೆಂಕಿ ಬಿದ್ದು ಸಾಕಷ್ಟು ನಷ್ಟ ಸಂಭವಿಸಿದ್ದರೂ ಸದಸ್ಯರು ಹಾಗೂ ಪದಾಧಿಕಾರಿಗಳ ಸತತ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಿದೆ’ ಎಂದರು.
ಜಮೀನಿನ ಭರವಸೆ: ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ಸಂಘದ ಸಮುದಾಯ ಭವನ ನಿರ್ಮಿಸಲು ನಗರದಲ್ಲಿ ಎರಡು ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಲು ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.
ಮನವಿ: ‘ಕೊರೋನಾ ಭೀತಿಯಲ್ಲಿ ಶನಿವಾರದಿಂದ (ಮಾ.14) ರಾಜ್ಯದಲ್ಲಿ ಯಾವುದೇ ಸಮಾರಂಭ ನಡೆಸಬಾರದು ಎಂಬ ಆದೇಶಕ್ಕೆ ವಕೀಲರು ಸಹಕರಿಸ ಬೇಕು’ ಎಂದು ಸಚಿವ ಎಸ್.ಸುರೇಶ್ ಕುಮಾರ್ ಅವರು ವಕೀಲರಿಗೆ ಮನವಿ ಮಾಡಿದರು.
ಸಹಕಾರ ಸಂಘದ ಉಪಾಧ್ಯಕ್ಷ ಟಿ.ಎನ್.ಶಂಕರ್, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷೆ ಪಿ.ವಿ. ಕಲ್ಪನಾ ನಿರ್ದೇಶಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.