ADVERTISEMENT

ತಿಂಗಳಿಗೆ ₹ 12 ಸಾವಿರ ಗೌರವಧನಕ್ಕೆ ಆಶಾ ಕಾರ್ಯಕರ್ತೆಯರ ಆಗ್ರಹ

ಸಾಂಕೇತಿಕ ಪ್ರತಿಭಟನೆ: ಜುಲೈ 10ರಿಂದ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 16:55 IST
Last Updated 30 ಜೂನ್ 2020, 16:55 IST

ಬೆಂಗಳೂರು: ’ತಿಂಗಳಿಗೆ ₹ 12 ಸಾವಿರ ಗೌರವಧನ ನೀಡಬೇಕು’ ಎಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಸಹಯೋಗದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಮಲ್ಲೇಶ್ವರದಲ್ಲಿರುವ ಎಐಯುಟಿಯುಸಿ ಕಚೇರಿ ಎದುರು ಸೇರಿದ್ದ ಕಾರ್ಯಕರ್ತೆಯರು, ‘ಬೇಡಿಕೆ ಈಡೇರಿಕೆಗೆ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಜುಲೈ 10ರಿಂದ ರಾಜ್ಯದಾದ್ಯಂತ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಕೊರೊನಾ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು, ಕೊರೊನಾ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ. ಮನೆ ಮನೆ ಸಮೀಕ್ಷೆ ಮಾಡಿ ಸೋಂಕು ಹರಡದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಸಿಗುತ್ತಿರುವ ಮಾಸಿಕ ₹4 ಸಾವಿರ ಗೌರವ ಧನ ಯಾವುದಕ್ಕೂ ಸಾಲುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಗೌರವ ಧನ ಹೆಚ್ಚಿಸುವ ಜೊತೆಯಲ್ಲೇ ಗುಣಮಟ್ಟದ ಮಾಸ್ಕ್, ಫೇಸ್ ಶಿಲ್ಡ್, ಸ್ಯಾನಿಟೈಸರ್, ಗ್ಲೌಸ್‌ ಹಾಗೂ ಕಿಟ್‌ಗಳನ್ನು ಕಾರ್ಯಕರ್ತೆಯರಿಗೆ ನೀಡಬೇಕು’ ಎಂದೂ ಒತ್ತಾಯಿಸಿದರು.

ಮನವಿ ಸಲ್ಲಿಕೆ:ಪ್ರತಿಭಟನೆ ಬಳಿಕ ಎಐಯುಟಿಯುಸಿ ಬೆಂಗಳೂರು ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ಹನುಮೇಶ್ ನೇತೃತ್ವದ ನಿಯೋಗವು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.