ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಚಿಕ್ಕಬಳ್ಳಾಪುರದ ಜೋಳದ ವ್ಯಾಪಾರಿ ರಾಮಕೃಷ್ಣ ಅವರು ಸುಳ್ಳು ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿ ಬಂಧಿಸುವಂತೆ ಮಾಡಿದ್ದಾರೆ. ಠಾಣೆಯಲ್ಲಿ ಪೊಲೀಸರೊಂದಿಗೆ ರಾಮಕೃಷ್ಣ ಅವರೂ ಹಲ್ಲೆ ನಡೆಸಿದ್ದಾರೆ ಎಂದು ಮೆಕ್ಕೆ ಜೋಳದ ವ್ಯಾಪಾರಿ ಅಕ್ಬರ್ ಪಾಷಾ ದೂರಿದರು.
‘ರಾಮಕೃಷ್ಣ ಹಾಗೂ ಅವರ ತಮ್ಮ ಲಕ್ಷ್ಮೀಪತಿಯವರಿಗೆ ವೈಮನಸ್ಸು ಇದೆ. ನಾನು ರಾಮಕೃಷ್ಣ ಅವರೊಂದಿಗೆ ಯಾವುದೇ ವ್ಯವಹಾರ ನಡೆಸಿಲ್ಲ. ಬೇಕಿದ್ದರೆ ಸಿ.ಸಿ.ಟಿ.ವಿ ಕ್ಯಾಮೆರಾ, ನನ್ನ ಬ್ಯಾಂಕ್ ಖಾತೆ, ನನ್ನ ಇಬ್ಬರು ಪತ್ನಿಯರ, ಮಕ್ಕಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಿ ಎಂದ ಅವರು, ‘ನಾನು ಸುಮಾರು ₹1.85 ಕೋಟಿ ನೀಡುವುದು ಬಾಕಿ ಇದೆ ಎಂದು ಸುಳ್ಳು ದೂರು ನೀಡಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
‘ನನ್ನ ತಮ್ಮ ಸದ್ದಾಂ ನಾಸೀರ್ ಮತ್ತು ರಾಮಕೃಷ್ಣರ ನಡುವೆ ವ್ಯವಹಾರ ಇದೆ. ಅವರು ಎಷ್ಟು ಹಣ ಕೊಡಲು ಬಾಕಿ ಇದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನ ಹಾಗೂ ರಾಮಕೃಷ್ಣರ ತಮ್ಮ ಲಕ್ಷ್ಮೀಪತಿ ನಡುವೆ ವ್ಯವಹಾರ ಇದೆ. ರಾಮಕೃಷ್ಣಗೆ ಅವರ ತಮ್ಮನೊಂದಿಗೆ ಸರಿ ಇಲ್ಲ ಎನ್ನುವ ಕಾರಣಕ್ಕೆ ನನ್ನ ಮೇಲೆ ಆರೋಪ ಹೊರಿಸಿದ್ದಾರೆ’ ಎಂದು ಹೇಳಿದರು.
‘ರಾಮಕೃಷ್ಣ ನೇಪಾಳದಿಂದ ತಂದ ಕಳಪೆ ಗುಣಮಟ್ಟದ ಹಾಗೂ ಕಳ್ಳ ಸಾಗಣೆಯಿಂದ ತರಿಸಿದ್ದ ಜೋಳ ಖರೀದಿಸಿ, ತೆಲಂಗಾಣದಲ್ಲಿ ಮಾರುವಂತೆ ನನ್ನ ಹಾಗೂ ನನ್ನ ಸಹೋದರರ ಮೇಲೆ ಒತ್ತಡ ಹಾಕುತ್ತಿದ್ದರು. ಅದಕ್ಕೆ ನಾನು ಒಪ್ಪಿಲ್ಲ’ ಎಂದರು.
‘ಪೊಲೀಸರು ಕರೆದುಕೊಂಡು ಹೋಗಿ ನನಗೆ ಚಿತ್ರಹಿಂಸೆ ನೀಡಿದ್ದಾರೆ. ನನ್ನ ಸಹೋದರಿಯರು ಹೈದರಾಬಾದ್ನಲ್ಲಿರುವ ಅಕ್ಬರ್ ಅವರ ಮೂಲಕ ಸಚಿವ ಜಮೀರ್ ಅಹಮ್ಮದ್ ಬಳಿ ಸಹಾಯಕ್ಕೆ ಮನವಿ ಮಾಡಿದ್ದರು. ಆದರೆ, ವಂಚನೆ ಮಾಡಿದವರ ಪರವಾಗಿ ಸಚಿವರು ಇದ್ದಾರೆ ಎಂದು ರಾಮಕೃಷ್ಣ ಸುಳ್ಳು ಹಬ್ಬಿಸಿದ್ದಾರೆ’ ಎಂದು ತಿಳಿಸಿದರು.
‘ಈ ಪ್ರಕರಣದ ತನಿಖೆ ನಡೆಸಲಿ. ನನ್ನ ತಪ್ಪು ಇದ್ದರೆ ಗಲ್ಲಿಗೇರಿಸಲಿ. ಇಲ್ಲದೇ ಇದ್ದರೆ ಪೊಲೀಸರು ಮತ್ತು ರಾಮಕೃಷ್ಣ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.