ಬೆಂಗಳೂರು: ‘ಸತ್ತರೆ ಹೂಳಲು ಜಾಗವೇ ಇಲ್ಲ, ₹ 40 ಕೋಟಿ ಕೊಟ್ಟರೆ ಇಟ್ಟುಕೊಳ್ಳೋದು ಎಲ್ಲಿ?’
ವಿಧಾನಸಭೆಯಲ್ಲಿ ಈ ರೀತಿ ಸ್ವಾರಸ್ಯಕರವಾಗಿ ಪ್ರಶ್ನಿಸಿದವರು ಬಸವಕಲ್ಯಾಣದ ಕಾಂಗ್ರೆಸ್ ಶಾಸಕ ನಾರಾಯಣರಾವ್. ವಿಶ್ವಾಸ ಮತದ ನಿರ್ಣಯದ ಮೇಲೆ ಮಾತನಾಡಿದರು.
‘ಬಿಜೆಪಿಯವರು ₹ 45 ಕೋಟಿ ಕೊಟ್ರೆ ಎಲ್ಲಿ ಬಚ್ಚಿಡೋದು? ನಾನು ಇನ್ನೂ ಪ್ಯಾನ್ ಕಾರ್ಡ್ ಮಾಡಿಸಿಲ್ಲ. ಆಷ್ಟು ರೊಕ್ಕ ಕೊಟ್ಟರೆ, ಲೆಕ್ಕ ಇಡಲು ನನ್ನ ಬಳಿ ಲೆಕ್ಕಿಗನೂ ಇಲ್ಲ. ಕದ್ದುಮುಚ್ಚಿ ತಗೊಂಡ್ರೆ ರೈಡ್ ಹಾಕಿಸಿ ಜೈಲಿಗೆ ತಳ್ಳುತ್ತಾರೆ. ಮೇಲೆ ಕೂತು ಅಮಿತ್ ಶಾ ಕಣ್ಣು ಇಟ್ಟಿರುತ್ತಾರೆ’ ಎಂದು ನಾರಾಯಣರಾವ್ ಹೇಳಿದಾಗ ಸದನದಲ್ಲಿ ನಗೆಯ ಅಲೆ ಉಕ್ಕಿತು.
‘ನಮ್ಮ ಸಾಮ್ರಾಟರು ಮತದಾರರು. ಅವರ ದೃಷ್ಟಿಯಲ್ಲಿ ನಾವು ಕೀಳಾಗಬಾರದು. ನಾನು ನಮ್ಮ ಮತ ಕ್ಷೇತ್ರದ ಎರಡು ವಾರ್ಡ್ಗಳಲ್ಲಿ ಕೆಲಸ ಮಾಡಿಸಲು ಸ್ಕೂಟರ್ನಲ್ಲಿ ಹೋಗಿದ್ದೆ. ಆದರೆ, ಟಿವಿಯಲ್ಲಿ ಮಾತ್ರ ಮುಂಬೈನಲ್ಲಿ ಇದ್ದೇನೆ ಎಂಬ ವಾರ್ತೆ ಬರುತ್ತಿತ್ತು. ನಾನು ಬಡವ ಸ್ವಾಮಿ, ನಮ್ಮನ್ನೆಲ್ಲ ಏಕೆ ಹೀಗೆ ಗೋಳು ಹೊಯ್ದುಕೊಳ್ಳುತ್ತೀರಿ’ ಎಂದು ಪ್ರಶ್ನಿಸಿದರು.
‘ನನ್ನ ಮಾಲಿಕ ಮತದಾರ ಸ್ವಾಮಿ. ನನ್ನನ್ನು ಇಲ್ಲಿ ಕಳುಹಿಸುವ ಅಥವಾ ಮನೆಗೆ ಕಳುಹಿಸುವ ಅಧಿಕಾರ ಇರುವುದು ಅವನಿಗೆ ಮಾತ್ರ, ಎಂದು ಮಾರ್ಮಿಕಾಗಿ ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.