ಬೆಂಗಳೂರು: ಎಟಿಎಂ ಘಟಕಕ್ಕೆ ನುಗ್ಗಿ ಗ್ಯಾಸ್ ಕಟ್ಟರ್ನಿಂದ ಯಂತ್ರ ಮುರಿದು ಹಣ ದೋಚಿದ್ದ ಇಬ್ಬರು ಆರೋಪಿಗಳನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
‘ರಾಜಸ್ಥಾನ್ ಭರತ್ಪುರ ಜಿಲ್ಲೆಯ ಸಲೀಂ (27) ಹಾಗೂ ಸಜೀದ್ (21) ಬಂಧಿತರು. ಅವರಿಂದ ₹ 4 ಲಕ್ಷ ನಗದು, ಕಾರು ಹಾಗೂ ಗ್ಯಾಸ್ ಕಟ್ಟರ್ ಜಪ್ತಿ ಮಾಡಲಾಗಿದೆ. ಇತರ ಮೂವರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ರಾಜಸ್ಥಾನದಿಂದ ಕಾರಿನಲ್ಲಿ ನಗರಕ್ಕೆ ಬಂದಿದ್ದ ಆರೋಪಿಗಳು, ಪರಿಚಯಸ್ಥರ ಮನೆಯಲ್ಲಿ ಉಳಿದುಕೊಂಡಿದ್ದರು. ಸೆ. 30ರಂದು ರಾತ್ರಿ ಭಟ್ಟರಹಳ್ಳಿಯ ಬಸವಪುರ ಮುಖ್ಯರಸ್ತೆಯಲ್ಲಿನ ಎಟಿಎಂ ಘಟಕಕ್ಕೆ ನುಗ್ಗಿ ₹ 11.44 ಲಕ್ಷ ದೋಚಿಕೊಂಡು ಪರಾರಿಯಾಗಿದ್ದರು.’
‘ಕೃತ್ಯದ ಬಳಿಕ ಐವರು ಆರೋಪಿಗಳ ಮೂವರು, ವಿಮಾನದಲ್ಲಿ ದೆಹಲಿಗೆ ಹೋಗಿದ್ದರು. ಇನ್ನಿಬ್ಬರು ಕಾರಿನಲ್ಲಿ ತಮ್ಮೂರಿಗೆ ತೆರಳಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಹಾರು ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಭರತ್ಪುರದಲ್ಲಿ ಆರೋಪಿಯೊಬ್ಬನನ್ನು ಸೆರೆ ಹಿಡಿಯಲಾಯಿತು. ನಂತರ ಉಳಿದವರೂ ಸಿಕ್ಕಿಬಿದ್ದರು. ರಾಜ್ಯದ ಹಲವೆಡೆ ಹಾಗೂ ಹೊರ ರಾಜ್ಯದಲ್ಲೂ ಆರೋಪಿಗಳು ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.