ADVERTISEMENT

ರೌಡಿಗಳೆಲ್ಲ ವಿಶ್ವನಾಥ್‌ ಜತೆ: ಕೊಲೆ ಸಂಚು ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 16:27 IST
Last Updated 1 ಡಿಸೆಂಬರ್ 2021, 16:27 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ನನ್ನ ಕೊಲೆಗೆ ಕಾಂಗ್ರೆಸ್ ಮುಖಂಡರು ಎಂ.ಎನ್.ಗೋಪಾಲಕೃಷ್ಣ ನೇತೃತ್ವದಲ್ಲಿ ಸಂಚು ನಡೆಸಿದ್ದಾರೆ ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಮಾಡಿರುವ ಆರೋಪವನ್ನು ಗೋಪಾಲಕೃಷ್ಣ ತಳ್ಳಿ ಹಾಕಿದ್ದಾರೆ. ಅಲ್ಲದೇ ಈ ಬಗ್ಗೆಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

‘ವಿಡಿಯೊದಲ್ಲಿರುವ ಶೇಕಡ 80ರಷ್ಟು ಭಾಗ ನಕಲಿ. ನನ್ನ ವಿರುದ್ಧ ಆರೋಪ ಮಾಡಿರುವುದರ ಹಿಂದೆ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಷಡ್ಯಂತ್ರವಿದೆ. ಕುಳ್ಳ ದೇವರಾಜ್‌ ಮತ್ತು ವಿಶ್ವನಾಥ್‌ ಮೊಬೈಲ್‌ ದೂರವಾಣಿಗಳ ಮೂರು ತಿಂಗಳ ಕರೆ ವಿವರ ಪರಿಶೀಲಿಸಿದರೆ ಸತ್ಯ ಬಯಲಾಗುತ್ತದೆ’ ಎಂದು ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಂ.ಎನ್‌.ಗೋಪಾಲಕೃಷ್ಣ ಆರೋಪಿಸಿದರು.

‘ಎಂಟು ಎಕರೆ ಜಮೀನಿನ ವಿಷಯದಲ್ಲಿ ಶಾಸಕರಿಂದ ತೊಂದರೆ ಆಗುತ್ತಿದೆ ಎಂದು ದೇವರಾಜ್‌ ನನ್ನ ಬಳಿ ಬಂದಿದ್ದ. ಆಗ, ₹ 5 ಲಕ್ಷ ತಂದಿದ್ದು, ಅದರಲ್ಲಿ ₹ 2 ಲಕ್ಷ ವಾಪಸ್‌ ತೆಗೆದುಕೊಂಡು ಹೋಗಿದ್ದ. ದೇವರಾಜ್‌ ಶಾಸಕರ ಬಲಗೈ ಬಂಟ. ಅವರ ಯೋಜನೆಯಂತೆ ಎಲ್ಲವೂ ನಡೆದಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಾನು ಯಾರ ಕೊಲೆಗೂ ಸುಪಾರಿ ನೀಡಿಲ್ಲ. ಎಲ್ಲ ಆರೋಪಗಳೂ ಸುಳ್ಳು. ದೇವರಾಜ್‌ ವಿರುದ್ಧ ದೂರು ದಾಖಲಿಸುತ್ತೇನೆ’ ಎಂದರು.

‘ರೌಡಿಗಳೆಲ್ಲ ವಿಶ್ವನಾಥ್‌ ಜತೆಗಿದ್ದಾರೆ’

‘ಬೆಂಗಳೂರಿನ ಎಲ್ಲ ರೌಡಿಗಳೂ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಜತೆಗೇ ಇದ್ದಾರೆ. ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ನೀಡುವವರಿಗೆ ಈ ರೀತಿಯಲ್ಲಿ ಒತ್ತಡ ಹಾಕಲಾಗುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಚುನಾವಣೆ ಕಾರಣದಿಂದ ಬೆದರಿಸಲು ಈ ರೀತಿಯ ಆರೋಪ ಮಾಡಲಾಗಿದೆ. ತಪ್ಪು ಮಾಡಿದವರನ್ನು ನಾವು ರಕ್ಷಿಸುವುದಿಲ್ಲ. ತಪ್ಪು ಮಾಡಿದವರನ್ನು ವಿಚಾರಣೆ ಮಾಡಲಿ. ಸಾಬೀತಾದರೆ ಶಿಕ್ಷೆ ನೀಡಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.