ADVERTISEMENT

₹ 2 ಕೋಟಿಗೆ ಕಲ್ಲು ಮಾರಲು ಯತ್ನ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 22:07 IST
Last Updated 17 ಮಾರ್ಚ್ 2023, 22:07 IST
ಸಿಸಿಬಿ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ಕಲ್ಲು
ಸಿಸಿಬಿ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ಕಲ್ಲು   

ಬೆಂಗಳೂರು: ಅದೃಷ್ಟದ ‘ಸಾಲಿಗ್ರಾಮ’ ಕಲ್ಲುಗಳೆಂದು ಸಾರ್ವಜನಿಕರಿಗೆ ಸುಳ್ಳು ಹೇಳಿ ₹ 2 ಕೋಟಿಗೆ ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಮಹಾರಾಷ್ಟ್ರದ ಮನೋಜ್ (57) ಹಾಗೂ ಆದಿತ್ಯ ಸಾಗರ್ (37) ಬಂಧಿತರು. ಇವರಿಂದ ಎರಡು ಕಲ್ಲುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಜಂಟಿ ಕಮಿಷನರ್ ಎಸ್.ಡಿ. ಶರಣಪ್ಪ ತಿಳಿಸಿದರು.

‘ನಗರಕ್ಕೆ ಇತ್ತೀಚೆಗೆ ಬಂದಿದ್ದ ಆರೋಪಿಗಳು, ರಾಜಾಜಿನಗರ ಠಾಣೆ ವ್ಯಾಪ್ತಿಯ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದರು. ಕೆಲ ಗ್ರಾಹಕರನ್ನು ಸಂಪರ್ಕಿಸಿ ಹೋಟೆಲ್‌ಗೆ ಕರೆಸಿದ್ದರು. ‘ಗುಜರಾತ್‌ನ ಗೋಮತಿ ನದಿಯಲ್ಲಿ ಎರಡು ಸಾಲಿಗ್ರಾಮ ಕಲ್ಲುಗಳು ಸಿಕ್ಕಿವೆ. ಇವು ವಿಷ್ಣು ರೂಪದ ಅದೃಷ್ಟದ ಕಲ್ಲುಗಳು’ ಎಂಬುದಾಗಿ ಆರೋಪಿಗಳು ತಿಳಿಸಿದ್ದರು.’

ADVERTISEMENT

‘ಬಟ್ಟೆಯೊಳಗೆ ಕಲ್ಲು ಇರಿಸಿ ಅದರ ಮೇಲೆ ಕರ್ಪೂರ ಇರಿಸಿದ್ದರು. ಪೆಟ್ರೋಲ್ ಸಹ ಸುರಿದಿದ್ದರು. ಬೆಂಕಿ ಹಚ್ಚಲು ಯತ್ನಿಸಿದ್ದರು. ಆದರೆ, ಬೆಂಕಿ ಹೊತ್ತಿಕೊಂಡಿರಲಿಲ್ಲ. ಇದುವೇ ಪವಾಡವೆಂದು ಹೇಳಿದ್ದ ಆರೋಪಿಗಳು, ₹ 2 ಕೋಟಿಗೆ ಕಲ್ಲು ಮಾರುವುದಾಗಿ ತಿಳಿಸಿದ್ದರು. ಇದನ್ನು ನಂಬಿದ್ದ ಜನ, ಕಲ್ಲುಗಳ ಖರೀದಿ ಸಂಬಂಧ ಮಾತುಕತೆ ನಡೆಸುತ್ತಿದ್ದರು’ ಎಂದು ಶರಣಪ್ಪ ಹೇಳಿದರು. ‘ವಂಚನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಗ್ರಾಹಕರ ವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ರಾಸಾಯನಿಕ ಸಿಂಪಡಿಸಿದ್ದ ಬಟ್ಟೆಯೊಳಗೆ ಆರೋಪಿಗಳು ಕಲ್ಲು ಇರಿಸಿದ್ದರು. ಹೀಗಾಗಿ, ಬಟ್ಟೆಗೆ ಬೆಂಕಿ ಹೊತ್ತಿಕೊಂಡಿರಲಿಲ್ಲ. ಇದುವೇ ಪವಾಡವೆಂದು ಹೇಳಿ ಜನರನ್ನು ನಂಬಿಸಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.