ಬೆಂಗಳೂರು: ಶಾಂತಿನಗರದ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿ ಅಬ್ದುಲ್ ಹಫೀಜ್ ಎಂಬುವರನ್ನು ಕೊಲೆ ಮಾಡಿದ್ದ ಅಪರಾಧಿ ಆನಂದ್ ಅಲಿಯಾಸ್ ನಂದಕುಮಾರ್ಗೆ ನಗರದ 57ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
2012ರ ಜುಲೈ 8ರಂದು ನಡೆದಿದ್ದ ಕೊಲೆ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
‘ಅಪರಾಧಿಯು ₹60 ಸಾವಿರ ದಂಡ ಪಾವತಿಸಬೇಕು. ಅದರಲ್ಲಿ, ₹50 ಸಾವಿರವನ್ನು ಕೊಲೆಯಾದ ಅಬ್ದುಲ್ ಹಫೀಜ್ ಅವರ ಪತ್ನಿಗೆ ನೀಡಬೇಕು’ ಎಂದು ಆದೇಶಿದೆ.
ಘಟನೆ ವಿವರ: ಆಟೊ ಚಾಲಕ ಆಗಿದ್ದಅಬ್ದುಲ್ ಹಫೀಜ್, ಪರಿಚಯಸ್ಥರ ಜೊತೆ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿ ಹೊರಟಿದ್ದರು. ಅಕ್ಕಿ ತಿಮ್ಮನಹಳ್ಳಿ ಕಾರ್ಪೊರೇಷನ್ ಸಮುದಾಯ ಭವನದ ಹತ್ತಿರ ಆಟೊವನ್ನು ಆನಂದ್ ಅಡ್ಡಗಟ್ಟಿದ್ದ. ಅಬ್ದುಲ್ ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಆಟೊದಿಂದ ಹೊರಗೆ ಎಳೆದಿದ್ದ.
ಚಾಕುವಿನಿಂದ ಅಬ್ದುಲ್ ಅವರ ಕತ್ತು, ತಲೆಯ ಹಿಂಭಾಗ, ಗಂಟಲು ಬಳಿ ಇರಿದಿದ್ದ. ತೀವ್ರ ಗಾಯಗೊಂಡು ಅಬ್ದುಲ್ ಮೃತಪಟ್ಟಿದ್ದರು.
ಅಶೋಕ ನಗರ ಪೊಲೀಸರು, ಶಾಂತಿನಗರದ ಭೀಮಣ್ಣ ಗಾರ್ಡನ್ ನಿವಾಸಿ ಆನಂದ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ವಿನಿತಾ ಪಿ. ಶೆಟ್ಟಿ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಎಂ. ಬೆಳಲದವರ ವಾದಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.