ಬೆಂಗಳೂರು: ‘ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಿಗೆ ಕೇಂದ್ರ ಸರ್ಕಾರದ ಮಾದರಿಯ (ಸಿಜಿಎಚ್ಎಸ್) ವೇತನ
ಶ್ರೇಣಿ ವಿಸ್ತರಿಸಬೇಕು’ ಎಂದು ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ ಆಗ್ರಹಿಸಿದೆ.
‘ಈ ಸಂಬಂಧ ಒಂದೂವರೆ ವರ್ಷದಲ್ಲಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಸರ್ಕಾರ ಸ್ಪಂದಿಸಿಲ್ಲ. ಆರೋಗ್ಯ ಇಲಾಖೆಯ ವೈದ್ಯರಿಗೆ ನೀಡಲಾಗುವ ಸಮಾನವೇತನ, ಸ್ಥಾನಮಾನವನ್ನು ವಿಸ್ತರಿಸಿ 2013ರಲ್ಲಿಯೇ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಎಲ್ಲ ಸೌಲಭ್ಯಗಳನ್ನೂ ಕಾಲಕಾಲಕ್ಕೆ ಅನ್ವಯಿಸುವಂತೆ ವಿಸ್ತರಿಸಲು ಆದೇಶ ಹೊರಡಿಸಲಾಗಿತ್ತು. ಆದರೆ, ವೇತನ ಭತ್ಯೆಯನ್ನು ಮಾತ್ರ ವಿಸ್ತರಿಸಲಾಗಿದೆ. ವೇತನ ಪರಿಷ್ಕರಣೆ ನಡೆದಿಲ್ಲ’ ಎಂದು ಸಂಘದ ಅಧ್ಯಕ್ಷ ಡಾ.ಶಂಕರಗೌಡ ಎಸ್. ಪಾಟೀಲ ತಿಳಿಸಿದ್ದಾರೆ.
‘ಆಯುಷ್ ವೈದ್ಯಾಧಿಕಾರಿಗಳು ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಸರ್ಕಾರ ಗುರುತಿಸುತ್ತಿಲ್ಲ. ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುವ ವೈದ್ಯರಿಗೆ ಸಿಜಿಎಚ್ಎಸ್ ವೇತನ ಶ್ರೇಣಿ ನೀಡಿದೆ. ಆರೋಗ್ಯ ಹಾಗೂ ಆಯುಷ್ ಇಲಾಖೆಯಡಿ ಬರುವ ವೈದ್ಯರಿಗೂ ವಿಸ್ತರಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸ
ಲಾಗುವುದು’ ಎಂದು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.