ADVERTISEMENT

‘ಆಯುಷ್ಮಾನ್’ ಚಿಕಿತ್ಸೆಗೆ ಹೆಚ್ಚಿದ ಬೇಡಿಕೆ

ಎಬಿಎಆರ್‌ಕೆ ಯೋಜನೆಯಡಿ ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಒಂದು ಕೋಟಿಗೂ ಅಧಿಕ ಪ್ರಕರಣಗಳಲ್ಲಿ ಚಿಕಿತ್ಸೆ

ವರುಣ ಹೆಗಡೆ
Published 18 ಜುಲೈ 2025, 0:30 IST
Last Updated 18 ಜುಲೈ 2025, 0:30 IST
<div class="paragraphs"><p>ಚಿಕಿತ್ಸೆ</p></div>

ಚಿಕಿತ್ಸೆ

   

ಬೆಂಗಳೂರು: ಖಾಸಗಿ ವೈದ್ಯಕೀಯ ವ್ಯವಸ್ಥೆಯಡಿ ಚಿಕಿತ್ಸೆಗಳು ದುಬಾರಿಯಾಗಿರುವ ಕಾರಣ, ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ (ಎಬಿಎಆರ್‌ಕೆ) ಯೋಜನೆಯಡಿ ಚಿಕಿತ್ಸೆಗೆ ಸರ್ಕಾರಿ ಸಂಸ್ಥೆಗಳತ್ತ ರೋಗಿಗಳು ಮುಖ ಮಾಡುತ್ತಿದ್ದು, ಕಳೆದ ಐದು ವರ್ಷಗಳಲ್ಲಿ ಒಂದು ಕೋಟಿಗೂ ಅಧಿಕ ಪ್ರಕರಣಗಳಲ್ಲಿ ಚಿಕಿತ್ಸೆ ಒದಗಿಸಲಾಗಿದೆ. 

ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಯ ಜತೆಗೆ ದುಬಾರಿ ಚಿಕಿತ್ಸೆಗಳು ಅಗ್ಗ ಹಾಗೂ ಉಚಿತವಾಗಿ ಒದಗಿಸುವುದು ಯೋಜನೆಯ ಆಶಯವಾಗಿದೆ. ಮಂಡಿ ಚಿಪ್ಪು, ಹೃದಯದ ಕವಾಟ ಬದಲಾವಣೆಯಂತಹ ಶಸ್ತ್ರಚಿಕಿತ್ಸೆಗಳು ಖಾಸಗಿ ವೈದ್ಯಕೀಯ ವ್ಯವಸ್ಥೆಯಡಿ ದುಬಾರಿಯಾಗಿರುವುದರಿಂದ, ಸರ್ಕಾರಿ ಆರೋಗ್ಯ ವಿಮೆಯಡಿ ಈ ಚಿಕಿತ್ಸೆ ಪಡೆಯಲು ರೋಗಿಗಳು ಒಲವು ತೋರುತ್ತಿದ್ದಾರೆ. ಎಬಿಎಆರ್‌ಕೆ ಯೋಜನೆಯಡಿ ಚಿಕಿತ್ಸೆ ಪಡೆಯುವವರ ಸಂಖ್ಯೆ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. 2020ರಲ್ಲಿ ಯೋಜನೆಯಡಿ ಚಿಕಿತ್ಸೆ ಪಡೆಯುವವರ ವಾರ್ಷಿಕ ಸಂಖ್ಯೆ 8 ಲಕ್ಷದ ಆಸುಪಾಸಿನಲ್ಲಿದ್ದರೆ, ಆ ಸಂಖ್ಯೆ 2024ರಲ್ಲಿ 35 ಲಕ್ಷ ದಾಟಿದೆ. 

ADVERTISEMENT

ಈ ಯೋಜನೆಯಡಿ ವಿತರಿಸಲಾಗುವ ಕಾರ್ಡ್‌ಗಳನ್ನು ‘ಆಯುಷ್ಮಾನ್‌ ಭಾರತ ಪ್ರಧಾನಮಂತ್ರಿ ಜನಾರೋಗ್ಯ’ ನ್ಯಾಷನಲ್ ಪೋರ್ಟಲ್‌ಗೆ ಸಂಯೋಜಿಸಲಾಗಿದೆ. ಇದರಿಂದಾಗಿ ಈ ಆರೋಗ್ಯ ಕಾರ್ಡ್‌ನ ನೆರವಿನಿಂದ ಯೋಜನೆಯಡಿ ದೇಶದ ಯಾವುದೇ ಭಾಗದಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರ ನೇಮಕ, ಕಿಯೋಸ್ಕ್ ಸ್ಥಾಪನೆ ಸೇರಿ ವಿವಿಧ ಕ್ರಮಗಳು ಯೋಜನೆಯಡಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಳವಾಗಲು ಸಹಕಾರಿಯಾಗಿದೆ. 

ಆಸ್ಪತ್ರೆಗಳಿಗೆ ಪ್ರೋತ್ಸಾಹ: ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಿಗೂ ಚಿಕಿತ್ಸೆಗೆ ಅನುಸಾರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಹಣ ಬಿಡುಗಡೆ ಮಾಡುತ್ತಿದೆ. ಈ ಹಣವನ್ನು ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಪ್ರೋತ್ಸಾಹ ಧನ ಒದಗಿಸಲು ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯೋಜನೆಯಡಿ ವಿವಿಧ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತಿದೆ. ಯೋಜನೆಯಡಿ ಅಪಘಾತದಂತಹ ತುರ್ತು ಸಂದರ್ಭದಲ್ಲಿ ಮಾತ್ರ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಅವಕಾಶವಿದೆ. ಅದೇ ರೀತಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿರದಿದ್ದರೆ ಶಿಫಾರಸು ಆಧಾರದಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಬಹುದಾಗಿದೆ. 

‘ಯೋಜನೆ ಬಗ್ಗೆ ಜನರಿಗೆ ಜಾಗೃತಿ ಮೂಡುತ್ತಿದೆ. ಯೋಜನೆಯಡಿ ಉಚಿತವಾಗಿ ನೀಡುವ ಕಾರ್ಡ್ ಹೊಂದಿರದಿದ್ದರೂ, ಪಡಿತರ ಚೀಟಿ ಇದ್ದಲ್ಲಿ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತಿದೆ. ಯೋಜನೆಯಡಿ ಚಿಕಿತ್ಸೆ ಅನುಸಾರ ಆಸ್ಪತ್ರೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದು ಆಸ್ಪತ್ರೆಯ ಅಭಿವೃದ್ಧಿಗೂ ಸಹಕಾರಿಯಾಗಿದೆ’ ಎಂದು ರಾಜ್ಯದಲ್ಲಿ ಯೋಜನೆ ಅನುಷ್ಠಾನ ಮಾಡುತ್ತಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಅಧಿಕಾರಿಯೊಬ್ಬರು ತಿಳಿಸಿದರು.

ಯೋಜನೆಯಡಿ ಶಿಫಾರಸಿನಂತಹ ಕೆಲ ಗೊಂದಲಗಳನ್ನು ನಿವಾರಿಸಿ ಗುಣಮಟ್ಟದ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ದುಬಾರಿ ಚಿಕಿತ್ಸೆಗಳೂ ಯೋಜನೆಯಡಿ ಬಹುತೇಕ ಉಚಿತವಾಗಿ ದೊರೆಯುತ್ತಿವೆ
ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

1650 ಚಿಕಿತ್ಸಾ ಪ್ಯಾಕೇಜ್‌

‘ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆ‌ 2018ರಲ್ಲಿ ಆರಂಭವಾಗಿದ್ದು ಯೋಜನೆಯಡಿ‌ ಬಿಪಿಎಲ್ ಕುಟುಂಬದವರಿಗೆ ವರ್ಷಕ್ಕೆ ₹ 5 ಲಕ್ಷದವರೆಗೆ ಆರೋಗ್ಯ ವಿಮೆಗೆ ಅವಕಾಶವಿದೆ. ರಾಜ್ಯದಲ್ಲಿ 62.09 ಲಕ್ಷ ಕುಟುಂಬಗಳು ‘ಆಯುಷ್ಮಾನ್‌ ಭಾರತ್’ ಯೋಜನೆ ಅಡಿ ಬರಲಿವೆ. ಉಳಿದ ಕುಟುಂಬಗಳನ್ನು ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ. ಎಪಿಎಲ್‌ ಕುಟುಂಬದ ಸದಸ್ಯರಿಗೆ ಗರಿಷ್ಠ ₹1.50 ಲಕ್ಷ ಚಿಕಿತ್ಸಾ ವೆಚ್ಚ ನಿಗದಿ ಮಾಡಿದ್ದು ಶೇ 30ರಷ್ಟು ಹಣವನ್ನು ಪಾವತಿಸಲಾಗುತ್ತದೆ. ಈ ಯೋಜನೆಯು 1650 ಚಿಕಿತ್ಸಾ ಪ್ಯಾಕೇಜ್‌ಗಳನ್ನು ಒಳಗೊಂಡಿದೆ. ಬೆನ್ನುಹುರಿ ವಿರೂಪಕ್ಕೆ ಸಂಬಂಧಿಸಿದ ಚಿಕಿತ್ಸೆ ಗಿಲ್ಲೈನ್-ಬರ್ರೆ ಸಿಂಡ್ರೋಮ್ (ಜಿಬಿಎಸ್) ಕಾಯಿಲೆಗೆ ನೀಡುವ ‘ಇಂಟ್ರಾವೀನಸ್‌ ಇಮ್ಯುನೋಗ್ಲೋಬಿನ್’ (ಐವಿಐಜಿ) ಥೆರಪಿಯಂತಹ ಚಿಕಿತ್ಸೆಗಳನ್ನು ಯೋಜನೆಯಡಿ ಇತ್ತೀಚೆಗೆ ಸೇರ್ಪಡೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.