ADVERTISEMENT

ನಾಡಿನ ಅನಾಮಧೇಯ ಹೋರಾಟಗಾರರ ಪುಸ್ತಕ ರಚನೆ: ಸಿ.ಎಂ ಬೊಮ್ಮಾಯಿ

ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಮೇ 2022, 20:26 IST
Last Updated 28 ಮೇ 2022, 20:26 IST
ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದ ಭಾಗವಾಗಿ ಸ್ವಯಂಸೇವಕರು ತ್ರಿವರ್ಣ ಧ್ವಜ ಹಿಡಿದು ಪಥಸಂಚಲನ ನಡೆಸಿದರು – ಪ್ರಜಾವಾಣಿ ಚಿತ್ರ
ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದ ಭಾಗವಾಗಿ ಸ್ವಯಂಸೇವಕರು ತ್ರಿವರ್ಣ ಧ್ವಜ ಹಿಡಿದು ಪಥಸಂಚಲನ ನಡೆಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಕನ್ನಡ ನಾಡಿನ ಅನಾಮಧೇಯ ಹೋರಾಟಗಾರರನ್ನು ಗುರುತಿಸಿ, ಅವರ ಇತಿಹಾಸವನ್ನು ಪುಸ್ತಕದ ರೂಪದಲ್ಲಿ ಆ.15ರಂದು ಲೋಕಾರ್ಪಣೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿಬೆಂಗಳೂರು ನಗರ ಜಿಲ್ಲೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯುನಗರದಲ್ಲಿ ಶನಿವಾರ ಹಮ್ಮಿಕೊಂಡ 'ಅಮೃತ ಭಾರತಿಗೆ ಕನ್ನಡದಾರತಿ' ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ‘ಸ್ವಾತಂತ್ರ್ಯ ಹೋರಾಟದಲ್ಲಿ ಅನಾಮಧೇಯ ಜನರು ಆಸ್ತಿಪಾಸ್ತಿ, ಜೀವ ಕಳೆದುಕೊಂಡಿದ್ದಾರೆ.ಸ್ವದೇಶಿ ಚಳವಳಿಯಲ್ಲಿ ಮನೆಯಲ್ಲಿದ್ದಮಹಿಳೆಯರೂ ಬೀದಿಗೆ ಬಂದು ಹೋರಾಡಿದರು.ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡ ನಾಡಿನ ಕೊಡುಗೆ ದೊಡ್ಡ ಪ್ರಮಾಣದಲ್ಲಿ ಇದೆ.ಹೊಸ ಚಿಂತನೆಯೊಂದಿಗೆ ಕರ್ನಾಟಕ ಕಟ್ಟುವ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ನೀಡಬೇಕು’ ಎಂದು ಹೇಳಿದರು.

ಶಾಸಕ ದಿನೇಶ್ ಗುಂಡೂರಾವ್, ‘ನಮ್ಮ ಮಕ್ಕಳಿಗೆ ಸ್ವಾತಂತ್ರ್ಯ ಸಂಗ್ರಾಮದ ವಿಚಾರವನ್ನು ಹೆಚ್ಚಿನ ರೀತಿಯಲ್ಲಿ ತಿಳಿಸಬೇಕು. ದೇಶವು ಜಗತ್ತಿನಲ್ಲಿ ಆಕರ್ಷಣೆಯಾಗಲು ಇಲ್ಲಿನ ಬಹುತ್ವ ಪ್ರಮುಖ ಕಾರಣ. ವಿವಿಧ ಸಂಪ್ರದಾಯ, ಭಾಷೆ, ಜನಾಂಗ ಸೇರಿದಂತೆ ವೈವಿಧ್ಯವನ್ನು ಕಾಣಲು ಸಾಧ್ಯ. ಪ್ರಜಾಪ್ರಭುತ್ವದ ವ್ಯವಸ್ಥೆ ನಮ್ಮನ್ನು ಕಾಪಾಡಿಕೊಂಡು ಬಂದಿದೆ. ನಮ್ಮ ರಾಜ್ಯದಲ್ಲಿ ನಡೆದ ಹೋರಾಟಗಳ ಬಗ್ಗೆ ಮಾಹಿತಿ ತಿಳಿಸುತ್ತಿರುವುದು ಉತ್ತಮಕಾರ್ಯ. ಸಮಾಜವನ್ನು ಒಗ್ಗೂಡಿಸಿ, ಮುಂದೆ ಸಾಗಲು ಅಮೃತ ಮಹೋತ್ಸವ ಕಾರಣ ಆಗಬೇಕು’ ಎಂದು ತಿಳಿಸಿದರು.

ADVERTISEMENT

ಸಂಸದ ಪಿ.ಸಿ. ಮೋಹನ್, ‘ನಾಡಿನ ಬಹಳಷ್ಟು ಜನ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ. ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ನೆನಪಿಸಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕನ್ನಡಿಗರ ಬಗ್ಗೆ ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಬೇಕು. ಬ್ರಿಟಿಷರ ಹೆಸರುಗಳಿರುವ ನಗರದ ರಸ್ತೆಗಳಿಗೆ ಕನ್ನಡಿಗರ ಹೆಸರು ಇಡಬೇಕು’ ಎಂದು ಆಗ್ರಹಿಸಿದರು.

ಇದಕ್ಕೂ ಮೊದಲು ಸ್ವರಸಿಂಚನ ಕಲಾ ಬಳಗದ ಪದ್ಮಿನಿ ಓಕ್ ಹಾಗೂ ಸಂಗಡಿಗರಿಂದ ದೇಶಭಕ್ತಿ ಗೀತೆಗಳ ಗಾಯನ, ಸಪ್ತಸ್ವರ ಆರ್ಟ್ ಆ್ಯಂಡ್ ಕ್ರಿಯೇಷನ್ಸ್‌ನಿಂದ ನೃತ್ಯ ಕಾರ್ಯಕ್ರಮ ನಡೆಯಿತು.

‘ರಾಷ್ಟ್ರ ಭಕ್ತಿಯ ಪಠ್ಯಪುಸ್ತಕ ಅಗತ್ಯ’
‘ಶಾಲಾ ಪಠ್ಯಪುಸ್ತಕವನ್ನು 70 ವರ್ಷಗಳಿಂದ ಅರಾಷ್ಟ್ರೀಯಗೊಳಿಸುವ ಪ್ರಯತ್ನ ನಡೆದಿದೆ. ಈಗ ಪರಿಷ್ಕರಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಷ್ಟ್ರ ಭಕ್ತಿ ಬೆಳೆಸುವ, ದೇಶಾಭಿಮಾನ ಮೂಡಿಸುವ ಪಠ್ಯಪುಸ್ತಕ ಅಗತ್ಯ. ಅಪ್ಪ–ಅಮ್ಮನನ್ನು ಅನಾಥಾಶ್ರಮಗಳಿಗೆ ಕಳಿಸುವ, ಮಕ್ಕಳನ್ನು ಬೀದಿಗೆ ಕಳುಹಿಸುವ ಪಠ್ಯಪುಸ್ತಕ ಬೇಕಾಗಿಲ್ಲ. ಮನುಷ್ಯರನ್ನು ಮನುಷ್ಯರನ್ನಾಗಿಸುವ ಪಠ್ಯಪುಸ್ತಕ ಬೇಕು. ಅಂತಹ ಪಠ್ಯಪುಸ್ತಕವನ್ನು ಸರ್ಕಾರ ತರಬೇಕು’ ಎಂದುಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷಬಿ.ವಿ. ವಸಂತ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.