ADVERTISEMENT

ರಿಯಾಲಿಟಿ ಷೋಗಳಲ್ಲಿ ಮೊದಲೇ ವಿಜೇತರ ನಿರ್ಧಾರ: ಹಿರಿಯ ಗಾಯಕಿ ಬಿ.ಕೆ.ಸುಮಿತ್ರಾ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 16:15 IST
Last Updated 5 ಅಕ್ಟೋಬರ್ 2019, 16:15 IST
ಕಾರ್ಯಕ್ರಮದಲ್ಲಿ ಗಾಯಕಿ ಡಾ. ಬಿ.ಕೆ ಸುಮಿತ್ರಾ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ರಾಜಶೇಖರ ಹತಗುಂದಿ ಮತ್ತು ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ ಇದ್ದಾರೆ
ಕಾರ್ಯಕ್ರಮದಲ್ಲಿ ಗಾಯಕಿ ಡಾ. ಬಿ.ಕೆ ಸುಮಿತ್ರಾ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ರಾಜಶೇಖರ ಹತಗುಂದಿ ಮತ್ತು ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ ಇದ್ದಾರೆ   

ಬೆಂಗಳೂರು: ‘ಟಿ.ವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಕೆಲವು ಸಂಗೀತ ರಿಯಾಲಿಟಿ ಷೋಗಳಲ್ಲಿ ವಿಜೇತರುಯಾರು ಎಂಬುದುಮೊದಲೇ ನಿರ್ಧಾರವಾಗಿರುತ್ತದೆ’ ಎಂದು ಹಿರಿಯ ಹಿನ್ನೆಲೆ ಗಾಯಕಿ ಬಿ.ಕೆ.ಸುಮಿತ್ರಾ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶನಿವಾರ ಆಯೋಜಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಂಥವರೇ ಗೆಲ್ಲಬೇಕು ಎಂದು ಕಾರ್ಯಕ್ರಮದ ಪ್ರಾರಂಭದಲ್ಲಿಯೇ ನಿರ್ಧಾರವಾಗಿರುತ್ತದೆ. ಈಗ ಇಂತಹ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಹೋಗುವುದನ್ನೇ ನಿಲ್ಲಿಸಿದ್ದೇನೆ’ ಎಂದು ತಿಳಿಸಿದರು.

‘ಐದಾರು ಹಾಡು ಕಲಿತು ಇಂತಹ ಕಾರ್ಯಕ್ರಮಗಳಿಗೆ ಬರುತ್ತಾರೆ. ಸ್ವಂತಿಕೆ ಇರುವುದಿಲ್ಲ. ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸ ಮಾಡಿರುವುದಿಲ್ಲ. ಪ್ರತಿಭಾವಂತರಿದ್ದರೂ ಕೆಲವೊಮ್ಮೆ ಅವರಿಗೆ ಗೆಲುವು ಸಿಗುವುದಿಲ್ಲ. ಜಾತಿ–ಮತ, ಹಿನ್ನೆಲೆ ನೋಡಿ ವಿಜೇತರನ್ನು ಆಯ್ಕೆ ಮಾಡಲಾಗುತ್ತಿದೆ. ಅರ್ಹ ಪ್ರತಿಭಾವಂತರು ಗೆಲ್ಲುವಂತಾಗಬೇಕು’ ಎಂದು ಹೇಳಿದರು.

ADVERTISEMENT

‘ನಮ್ಮ ಮಗ ಅಥವಾ ಮಗಳು ಒಂದು ಹಾಡು ಹಾಡಲು ಎರಡೂವರೆ ಸಾವಿರ ರೂಪಾಯಿ ಕೊಡುತ್ತೀರಾ ಎಂದು ಪೋಷಕರೇ ಕೇಳುತ್ತಾರೆ. ಇಂತಹ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸುವುದು ಮುಂದೆ ಪೋಷಕರಿಗೇ ಕಷ್ಟವಾಗಬಹುದು’ ಎಂದು ಸುಮಿತ್ರಾ ಅಭಿಪ್ರಾಯಪಟ್ಟರು.

‘ಶಾಸ್ತ್ರೀಯ ಸಂಗೀತ ಎಲ್ಲದಕ್ಕೂ ಅಡಿಪಾಯ. ಜ್ಯೂನಿಯರ್‌, ಸೀನಿಯರ್‌ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸಂಗೀತ ಕ್ಷೇತ್ರ ಪ್ರವೇಶಿಸಬೇಕು. ಆಗ ಗಾಯಕರಲ್ಲಿ ಸ್ವಂತಿಕೆ ಬರಲು ಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.