ಬೆಂಗಳೂರು: ಸಿಗರೇಟ್ ವಿಚಾರವಾಗಿ ಬೇಕರಿ ಮಾಲೀಕ ಮಂಜುನಾಥ್ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಜೆ.ಪಿ.ನಗರ 2ನೇ ಹಂತದ ಶಾರ್ಲೇಶ್ಕುಮಾರ್ (32), ನಿರಂಜನ್ (30), ಸಂತೋಷ್ (38) ಹಾಗೂ ಆರ್. ವಿಷ್ಣು (28) ಬಂಧಿತರು.
‘ಮಂಜುನಾಥ್ ಶೆಟ್ಟಿ ಅವರು ಜೆ.ಪಿ. ನಗರದ 24ನೇ ಮುಖ್ಯರಸ್ತೆಯಲ್ಲಿ ‘ಶ್ರೀ ಮಂಜುನಾಥೇಶ್ವರ್ ಕಾಂಡಿಮೆಂಡ್ಸ್’ ಬೇಕರಿ ನಡೆಸುತ್ತಿದ್ದಾರೆ. ಸೋಮವಾರ ಬೇಕರಿಗೆ ಬಂದಿದ್ದ ಆರೋಪಿಗಳು, ನೇರವಾಗಿ ಸಿಗರೇಟ್ ಪ್ಯಾಕ್ಗಳಿಗೆ ಕೈ ಹಾಕಿ ತೆಗೆದುಕೊಳ್ಳಲು ಮುಂದಾಗಿದ್ದರು. ಅದನ್ನು ಮಂಜುನಾಥ್ ಪ್ರಶ್ನಿಸಿದ್ದರು. ಅಷ್ಟಕ್ಕೆ ಕೋಪಗೊಂಡಿದ್ದ ಆರೋಪಿಗಳು, ಮಂಜುನಾಥ್ ಅವರನ್ನು ಬೇಕರಿಯಿಂದ ಹೊರಗೆ ಎಳೆದು ತಂದು ಕಬ್ಬಿಣದ ರಾಡ್ನಿಂದ ಹೊಡೆದಿದ್ದರು. ಬಟ್ಟೆ ಹರಿದಿದ್ದರು. ಬೇಕರಿ ಹೊರಗಿದ್ದ ವಸ್ತುಗಳನ್ನು ಚಿಲ್ಲಾಪಿಲ್ಲಿ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಘಟನೆಯಲ್ಲಿ ಗಾಯಗೊಂಡಿದ್ದ ಮಂಜುನಾಥ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.