ADVERTISEMENT

ಸರ್ಕಾರಿ ಇಲಾಖೆಗಳೇ ಜಲಮಂಡಳಿಗೆ ‘ಹೊರೆ’!

ಕೇಂದ್ರ, ರಾಜ್ಯ ಸರ್ಕಾರದ ಇಲಾಖೆಗಳಿಂದ ₹ 150 ಕೋಟಿ ನೀರಿನ ಶುಲ್ಕ ಬಾಕಿ

ಗಾಣಧಾಳು ಶ್ರೀಕಂಠ
Published 22 ಡಿಸೆಂಬರ್ 2024, 21:59 IST
Last Updated 22 ಡಿಸೆಂಬರ್ 2024, 21:59 IST
ಲೊಗೊ
ಲೊಗೊ   

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲ್ಯುಎಸ್‌ಎಸ್‌ಬಿ) ರಾಜ್ಯ, ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಅಧೀನ ಸಂಸ್ಥೆಗಳು ₹150 ಕೋಟಿಗೂ ಹೆಚ್ಚು ಮೊತ್ತದ ಶುಲ್ಕ ಬಾಕಿ ಉಳಿಸಿಕೊಂಡಿವೆ.‌‌

ರಾಜ್ಯ,  ಕೇಂದ್ರ ಸರ್ಕಾರದ ಇಲಾಖೆಗಳೇ ಸುಮಾರು ₹97 ಕೋಟಿ ಬಾಕಿ ಉಳಿಸಿಕೊಂಡಿವೆ. ಒಟ್ಟು ಬಾಕಿ ಮೊತ್ತದಲ್ಲಿ ₹104 ಕೋಟಿ ನೀರಿನ ಶುಲ್ಕವಾದರೆ, ₹46 ಕೋಟಿ ಬಡ್ಡಿ. 

ಬಾಕಿ ಉಳಿಸಿಕೊಂಡಿರುವಲ್ಲಿ ಪೊಲೀಸ್ ಇಲಾಖೆ, ಕೇಂದ್ರದ ರೈಲ್ವೆ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಈಜು ಕೊಳಗಳದ್ದು ಹೆಚ್ಚಿನ ಪಾಲಿದೆ.

ADVERTISEMENT

ಕೇಂದ್ರ, ರಾಜ್ಯ ಸರ್ಕಾರದ ಇಲಾಖೆಗಳು, ಬಿಬಿಎಂಪಿ, ರಕ್ಷಣಾ ಇಲಾಖೆ, ಶಾಸನಬದ್ಧ ಸಂಸ್ಥೆಗಳ 50ಕ್ಕೂ ಹೆಚ್ಚು ಇಲಾಖೆಗಳು ₹50 ಲಕ್ಷಕ್ಕಿಂತ ಹೆಚ್ಚು ಬಿಲ್ ಬಾಕಿ ಉಳಿಸಿ ಕೊಂಡಿವೆ. ಶಿಕ್ಷಣ ಇಲಾಖೆ ಸುಮಾರು ₹10 ಕೋಟಿ, ಆರೋಗ್ಯ ಇಲಾಖೆ ಸುಮಾರು ₹3 ಕೋಟಿಯಷ್ಟು ಶುಲ್ಕವನ್ನು ಬಾಕಿ ಉಳಿಸಿಕೊಂಡಿವೆ ಎಂದು ಜಲಮಂಡಳಿ ತಿಳಿಸಿದೆ.

ಜಲಮಂಡಳಿ ಸರ್ಕಾರದ  ಆರ್ಥಿಕ ನೆರವಿಲ್ಲದೇ ನಿರ್ವಹಣೆ ಮಾಡುತ್ತಿದೆ. ನೀರು ಮತ್ತು ಒಳಚರಂಡಿ ಶುಲ್ಕಗಳೇ ಮಂಡಳಿಗೆ ವರಮಾನದ ಮೂಲಗಳು. ಸರ್ಕಾರಿ ಇಲಾಖೆಗಳೇ ಕೋಟ್ಯಂತರ ಶುಲ್ಕ ಬಾಕಿ ಉಳಿಸಿಕೊಂಡಿರುವುದು ಮಂಡಳಿಗೆ ದೊಡ್ಡ ತಲೆನೋವಾಗಿದೆ.

ಜಲಮಂಡಳಿ 10.37 ಲಕ್ಷ ನೀರಿನ ಸಂಪರ್ಕಗಳನ್ನು ಹೊಂದಿದೆ. ಇದರಲ್ಲಿ, 8.55 ಲಕ್ಷ ಗೃಹಸಂಪರ್ಕ ಮತ್ತು 1.82 ಲಕ್ಷ  ವಾಣಿಜ್ಯ, ಕೈಗಾರಿಕೆ ಮತ್ತು ಇತರೆ ಸಂಪರ್ಕಗಳಾಗಿವೆ.  

ವಿವಿಧ ಸರ್ಕಾರಿ ಇಲಾಖೆಗಳಿಂದ ಜಲಮಂಡಳಿ ವಾರ್ಷಿಕವಾಗಿ ₹1,200 ಕೋಟಿಯಿಂದ ₹1,300 ಕೋಟಿ ಆದಾಯ ಗಳಿಸುತ್ತಿದೆ. ಮಂಡಳಿಗೆ ಮಾಸಿಕ ವಿವಿಧ ನಿರ್ವಹಣಾ ವೆಚ್ಚಗಳಿಗೆ ಸುಮಾರು ₹75 ಕೋಟಿ ಬೇಕಾಗುತ್ತದೆ.  

ಜಲಮಂಡಳಿಯ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ನೀರಿನ ಏರಿಕೆ ಅನಿವಾರ್ಯ ಎಂದು ಉಪ ಮುಖ್ಯಮಂತ್ರಿ ಇತ್ತೀಚೆಗೆ ಹೇಳಿದ್ದರು. ಜಲಮಂಡಳಿ ಅಧ್ಯಕ್ಷರು, ‘ದರ ಏರಿಕೆ ಅನಿವಾರ್ಯ. ಈ ಕುರಿತು ಸಲಹೆ ನೀಡಿ, ದರ ಏರಿಕೆಗೆ ಸಹಕರಿಸಬೇಕು’ ಎಂದು ನಗರ ಭಾಗದ ಜನಪ್ರತಿನಿಧಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಶುಲ್ಕ ಬಾಕಿ ಉಳಿಸಿಕೊಂಡಿರುವ ಇಲಾಖೆಗಳಿಗೆ ಹಲವು ಬಾರಿ ನೋಟಿಸ್ ನೀಡಲಾಗಿದೆ. ಈವರೆಗೂ ಶುಲ್ಕ ಪಾವತಿಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಹಣಕಾಸು ಇಲಾಖೆಗೆ ಪತ್ರ’

‘ನೀರಿನ ಶುಲ್ಕ ಬಾಕಿ ಇರುವ ಇಲಾಖೆಗಳಿಗೆ ನೋಟಿಸ್‌ ಕೊಟ್ಟಿದ್ದು ಪತ್ರಗಳನ್ನೂ ಬರೆದಿದ್ದೇವೆ. ಹಣಕಾಸು ಇಲಾಖೆಗೆ ಪತ್ರ ಬರೆದು ಇಲಾಖೆಗಳ ಅನುದಾನದಲ್ಲಿ ನೀರಿನ ಶುಲ್ಕ ಕಡಿತಗೊಳಿಸಿ ಮಂಡಳಿಗೆ ವರ್ಗಾಯಿಸಲು ಕೋರಿದ್ದೇವೆ. ಹಣಕಾಸು ಇಲಾಖೆಯ ಉತ್ತರದ ನಿರೀಕ್ಷೆಯಲ್ಲಿದ್ದೇವೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.