ಬೆಂಗಳೂರು: ಹಗಲು–ರಾತ್ರಿ ಎನ್ನದೆ ವಹಿವಾಟು ನಡೆಯುವ, ಸದಾ ಗಿಜಿಗುಡುವ ಪ್ರದೇಶವಾದ ಕಲಾಸಿಪಾಳ್ಯದ ಬಂಬೂ ಬಜಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಈಗ ರಸ್ತೆಗಳೇಇಲ್ಲವಾಗಿವೆ. ಕಾಂಕ್ರೀಟ್ ರಸ್ತೆ ನಿರ್ಮಿಸಲು ಇದ್ದ ರಸ್ತೆ ಅಗೆಯಲಾಗಿದ್ದು, ಮಾರುಕಟ್ಟೆಯಲ್ಲಿ ಸಂಚಾರವೇ ದುಸ್ತರವಾಗಿದೆ.
ಕೆ.ಆರ್.ಮಾರುಕಟ್ಟೆ ಎದುರಿನ ಹಳೆ ಬಂಬೂ ಬಜಾರ್ನಲ್ಲಿ ಈಗ ಕಾಲಿಡಲೂ ಜಾಗವಿಲ್ಲದಂತಾಗಿದೆ. ಕಬ್ಬಿಣದ ಅಂಗಡಿಗಳು, ಫ್ಲೈವುಡ್ ಶೀಟ್, ಗುಜರಿ ಅಂಗಡಿಗಳೇ ಹೆಚ್ಚಿರುವ ಪ್ರದೇಶ ಇದು.
ಇಲ್ಲಿಶಾಸಕರ ನಿಧಿಯ ಅನುದಾನದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ಕಾಮಗಾರಿ ಆರಂಭವಾಗಿ ಚರಂಡಿ ಮತ್ತು ಪೈಪ್ಲೈನ್ ಕೆಲಸ ಪೂರ್ಣಗೊಳ್ಳುವಷ್ಟರಲ್ಲಿ ಕೋವಿಡ್ ಆರಂಭವಾಯಿತು. ಅಷ್ಟರಲ್ಲಾಗಲೇ ರಸ್ತೆಗಳನ್ನು ಅಗೆಯಲಾಗಿದ್ದು, ಮತ್ತೆ ಕಾಮಗಾರಿ ತ್ವರಿತಗತಿಯಲ್ಲಿ ಆರಂಭವಾಗಿಲ್ಲ.
‘ಬಂಬೂ ಬಜಾರ್ ರಸ್ತೆ, ಬಂಬೂ ಬಜಾರ್ ಕ್ರಾಸ್ ರಸ್ತೆ, ಎನ್.ಆರ್.ರಸ್ತೆ,ಕಸಾಯಿಖಾನೆ ರಸ್ತೆ, ಕುಂಬಾರಗುಂಡಿ ಬಡಾವಣೆಗಳಲ್ಲಿ ವಾಹನ ಸಂಚಾರವಿರಲಿ, ಜನ ಸಂಚಾರವೇ ಸಾಧ್ಯವಾಗದ ಸ್ಥಿತಿ ಇದೆ. ಮಳೆ ಬಂದರೆ ಅಂಗಡಿಯಿಂದ ಹೊರಕ್ಕೆ ಕಾಲಿಡಲು ಸಹ
ಸಾಧ್ಯವಾಗುವುದಿಲ್ಲ’ ಎಂದು ವ್ಯಾಪಾರಿಗಳು ಹೇಳುತ್ತಾರೆ.
‘ಕಾಮಗಾರಿ ಆರಂಭಿಸಿ ರಸ್ತೆ ಅಗೆದು ಬಿಟ್ಟು ಹೋದ ಅಧಿಕಾರಿಗಳು ಮತ್ತೆ ತಿರುಗಿ ನೋಡಿಲ್ಲ. ಕೋವಿಡ್ ಕಾರಣಕ್ಕೆ ವಹಿವಾಟು ಕಡಿಮೆಯಾಗಿದೆ. ಈಗ ಇಡೀ ಬಂಬೂ ಬಜಾರ್ಗೆ ವಾಹನಗಳೇ ಬಾರದ ಕಾರಣ ವ್ಯಾಪಾರವೇ ನಿಂತು ಹೋಗಿದೆ’ ಎಂದು ಅಳಲು ತೋಡಿಕೊಂಡರು.
‘ರಾಜ್ಯದ ವಿವಿಧ ನಗರ ಮತ್ತು ಹೊರ ರಾಜ್ಯಗಳಿಂದಲೂ ಗ್ರಾಹಕರು ಬರುತ್ತಾರೆ. ರಸ್ತೆಯೇ ಇಲ್ಲದ ಕಾರಣ ಯಾರೊಬ್ಬರೂ ಬಾರದಂತಾಗಿದೆ. ವಹಿವಾಟೇ ಇಲ್ಲದ ಕಾರಣ ಸಾಲದ ಕಂತು ಪಾವತಿಸಲು ಪರದಾಡುತ್ತಿದ್ದೇವೆ’ ಎಂದು ಹೇಳಿದರು.
‘ತಳ್ಳುವ ಗಾಡಿಯನ್ನೇ ನಂಬಿಕೊಂಡಿರುವ ನೂರಾರು ಕಾರ್ಮಿಕರಿದ್ದಾರೆ. ಈ ಗುಂಡಿಗಳ ನಡುವೆ ಗಾಡಿ ತಳ್ಳಲು
ಸಾಧ್ಯವಾಗುತ್ತಿಲ್ಲ. ಒಂಟೆತ್ತಿನ ಗಾಡಿ ಇಟ್ಟುಕೊಂಡವರ ಜೀವನವೂ ಬೀದಿಗೆ ಬಿದ್ದಿದೆ.ಕೂಡಲೇ ಕಾಮಗಾರಿಯನ್ನು ಪುನರ್ ಆರಂಭಿಸಿ ಶೀಘ್ರವಾಗಿ ಪೂರ್ಣಗೊಳಿಸಬೇಕು’ ಎಂದು ಮನವಿ ಮಾಡಿದರು.
15 ದಿನದಲ್ಲಿ ಕಾಮಗಾರಿ ಪೂರ್ಣ
‘ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿ ಮತ್ತೆ ಆರಂಭವಾಗಿದ್ದು, 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಶಾಸಕ ಉದಯ ಗರುಡಾಚಾರ್ ತಿಳಿಸಿದರು.
‘ಬಂಬೂ ಬಜಾರ್ ಮತ್ತು ಸುತ್ತಲ ಪ್ರದೇಶವನ್ನು ಸ್ವಚ್ಛ ಮತ್ತು ಸುಂದರಗೊಳಿಸಬೇಕು ಎಂಬ ಕಾರಣದಿಂದ ಶಾಸಕರ ನಿಧಿಯಿಂದಲೇ ಯೋಜನೆ ಕೈಗೆತ್ತಿಕೊಂಡಿದ್ದೇನೆ. ಲಾಕ್ಡೌನ್ ಆಗದಿದ್ದರೆ ಕಾಮಗಾರಿ ಮುಗಿದು ಎಷ್ಟೋ ದಿನಗಳಾಗುತ್ತಿತ್ತು’ ಎಂದರು.
‘ಮಂಗಳವಾರವಷ್ಟೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಪಕ್ಕದಲ್ಲೇ ಹಾದು ಹೋಗುವ ರಾಜಕಾಲುವೆಯನ್ನೂ ಸ್ವಚ್ಛಗೊಳಿಸುವ ಕಾಮಗಾರಿಯನ್ನೂ ಆರಂಭಿಸಿದ್ದೇವೆ. ರಸ್ತೆ ಪಕ್ಕದ ಚರಂಡಿ, ಪೈಪ್ಲೈನ್ ಅಳವಡಿಕೆ ಎಲ್ಲವೂ ಮಗಿದಿದೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲು ಸೂಚನೆ ನೀಡಿದ್ದೇನೆ. ಮಳೆ ಬಾರದೆ ಇದ್ದರೆ ಕೆಲವೇ ದಿನಗಳಲ್ಲಿ ಬಂಬೂ ಬಜಾರ್ ಸುಂದರವಾಗಲಿದೆ’ ಎಂದು ಹೇಳಿದರು.
ಜಲ ಮಂಡಳಿಯ ಯಡವಟ್ಟು
‘850 ಮೀಟರ್ ಉದ್ದದ ಒಂದು ರಸ್ತೆಯಲ್ಲಿ ಜಲಮಂಡಳಿಯವರು ಒಳಚರಂಡಿ ಪೈಪ್ ಅಳವಡಿಸಿದ್ದಾರೆ. ಮತ್ತೆ ರಸ್ತೆಯನ್ನು ಅವರು ಸದೃಢಗೊಳಿಸದ ಕಾರಣ ಕಾಮಗಾರಿ ವಿಳಂಬವಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.
‘ಇಡೀ ರಸ್ತೆಯನ್ನು 15 ಅಡಿ ಆಳ ಮತ್ತು 6 ಅಡಿ ಅಗಲದ ಗುಂಡಿ ತೆಗೆದು ಪೈಪ್ ಅಳವಡಿಸಿದರು. ಅಷ್ಟೇ ಆಳದಿಂದ ಬಲಗೊಳಿಸಬೇಕಿದ್ದ ಜಲಮಂಡಳಿ ತನ್ನ ಪಾಲಿನ ಕೆಲಸ ಮಾಡಲಿಲ್ಲ. ಈಗ ಬಿಬಿಎಂಪಿಯಿಂದಲೇ ಈ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
ಅಂಕಿ–ಅಂಶ
₹3 ಕೋಟಿ - ಯೋಜನೆಯ ಒಟ್ಟು ಮೊತ್ತ
1.2 ಕಿಲೋ ಮೀಟರ್ - ನಿರ್ಮಾಣವಾಗಲಿರುವ ಕಾಂಕ್ರೀಟ್ ರಸ್ತೆಯ ಉದ್ದ
ಫೆಬ್ರುವರಿ 2020 - ಕಾಮಗಾರಿ ಆರಂಭವಾದ ತಿಂಗಳು
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.