ADVERTISEMENT

ಉದ್ಯಮಿ ಮನೆಯಲ್ಲಿ ₹47 ಲಕ್ಷ ಕಳವು: ಭದ್ರತಾ ಸಿಬ್ಬಂದಿಯಿಂದಲೇ ಕೃತ್ಯ?

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 21:37 IST
Last Updated 17 ನವೆಂಬರ್ 2021, 21:37 IST

ಬೆಂಗಳೂರು: ಉದ್ಯಮಿ ಶ್ರೀಧರ್‌ ಎಂಬುವರ ಮನೆಗೆ ನುಗ್ಗಿ ₹47 ಲಕ್ಷ ನಗದು ಹಾಗೂ 150 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ. ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಭದ್ರತಾ ಸಿಬ್ಬಂದಿಯಾಗಿದ್ದ ನೇಪಾಳದ ವಿಷ್ಣು, ಕಳ್ಳತನ ನಡೆದ ದಿನದಿಂದ ಕೆಲಸಕ್ಕೆ ಗೈರಾಗಿದ್ದಾನೆ. ಆತನೇ ಕೃತ್ಯ ಎಸಗಿರಬಹುದೆಂಬ ಅನುಮಾನವಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಮ್ಮನಹಳ್ಳಿ ಮುಖ್ಯರಸ್ತೆಯ ನಿವಾಸಿಯಾಗಿರುವ ಶ್ರೀಧರ್‌ ಅವರ ಮನೆಯಲ್ಲಿ ವಿಷ್ಣು ಎರಡು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ. ಮನೆಯವರೆಲ್ಲಾ ಕಾರ್ಯಕ್ರಮವೊಂದರ ನಿಮಿತ್ತ ಹೊರಗೆ ಹೋದಾಗ ಮಲಗುವ ಕೋಣೆಯ ಬೀರುವಿನಲ್ಲಿ ಇಟ್ಟಿದ್ದ ನಗದು ಹಾಗೂ ಚಿನ್ನಾಭರಣ ಕಳುವು ಮಾಡಿಕೊಂಡು ಪರಾರಿಯಾಗಿರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

ADVERTISEMENT

‘ಆರೋಪಿಯ ಭಾವಚಿತ್ರ, ಮೊಬೈಲ್‌ ಸಂಖ್ಯೆ, ವಿಳಾಸ ಹೀಗೆ ಯಾವ ಮಾಹಿತಿಯೂ ದೂರುದಾರರ ಬಳಿ ಇಲ್ಲ. ಹೀಗಿದ್ದರೂ ಆತನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದ ಅವರು ಹೊರಗೆ ಹೋಗುವಾಗ ಮನೆಯ ಬಾಗಿಲುಗಳನ್ನೂ ಹಾಕಿರಲಿಲ್ಲ. ಕೆಲಸಕ್ಕೆ ಸೇರಿದ ದಿನದಿಂದಲೇ ಕಳ್ಳತನಕ್ಕೆ ಹೊಂಚು ಹಾಕಿದಂತಿದ್ದ ಆರೋಪಿ ಮನೆಯ ಸುತ್ತಲೂ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಆಗಾಗ ಅಳಿಸಿ ಹಾಕುತ್ತಿದ್ದ. ಕಳವಿಗೂ ಮುನ್ನ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಗಿತಗೊಳಿಸಿದ್ದ. ಇದನ್ನೆಲ್ಲಾ ಗಮನಿಸಿದರೆ ಆತ ವ್ಯವಸ್ಥಿತವಾಗಿಯೇ ಕೃತ್ಯ ಎಸಗಿದ್ದಾನೆ ಎಂಬುದು ಮನದಟ್ಟಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.