ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ 5ರಿಂದ 8 ವರ್ಷ ವೃತ್ತಿ ಅನುಭವ ಹೊಂದಿದ ಬಡ ಹಾಗೂ ಯುವ ವಕೀಲರಿಗೆ ಹಣಕಾಸು ನೆರವು ಒದಗಿಸಲು ಬೆಂಗಳೂರು ವಕೀಲರ ಸಂಘ ಮುಂದಾಗಿದೆ.
ಈಗಾಗಲೇ ಎರಡು ಹಂತದಲ್ಲಿ 5 ವರ್ಷದ ವೃತ್ತಿ ಅನುಭವ ಹೊಂದಿರುವ ಒಟ್ಟು 368 ವಕೀಲರಿಗೆ ತಲಾ ₹ 5 ಸಾವಿರ ನೆರವು ನೀಡಿರುವ ಸಂಘವು ಇದೀಗ 5 ರಿಂದ 8 ವರ್ಷದೊಳಗೆ ವಕೀಲಿ ವೃತ್ತಿ ಅನುಭವ ಹೊಂದಿದ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೂ ನೆರವು ನೀಡಲು ತೀರ್ಮಾನಿಸಿದೆ.
'ವಕೀಲರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನೋಂದಣಿ ಸಂಖ್ಯೆ, ಸಂಘದ ಗುರುತಿನ ಚೀಟಿ, ಬ್ಯಾಂಕ್ ಖಾತೆ ವಿವರಗಳನ್ನು ಸಂಘದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಇಲ್ಲವೇ, ಸಿಟಿ ಸಿವಿಲ್ ಕೋರ್ಟ್ ಆವರಣದ ವಕೀಲರ ಭವನದಲ್ಲಿನ ಸಂಘದ ಕಚೇರಿಗೆ ಖುದ್ದು ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು' ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದ್ದಾರೆ.
'ದೇಣಿಗೆ ನೀಡ ಬಯಸುವವರು ಕರ್ನಾಟಕ ಬ್ಯಾಂಕ್ ಖಾತೆ ಸಂಖ್ಯೆ-1172000100026101, ಐಎಫ್ಎಸ್ಸಿ ಕೋಡ್ ಕೆಎಆರ್ಬಿ-0000117, ಸಿಟಿ ಸಿವಿಲ್ ಕೋರ್ಟ್ ಶಾಖೆಗೆ ಹಣ ಪಾವತಿಸಬಹುದು' ಎಂದು ಅವರು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.