ADVERTISEMENT

ಬೆಂಗಳೂರು | ಪಿ.ಜಿಗೆ ನುಗ್ಗಿ ಸುಲಿಗೆ: ಆರು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 23:30 IST
Last Updated 24 ನವೆಂಬರ್ 2025, 23:30 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಪೇಯಿಂಗ್ ಗೆಸ್ಟ್‌ಗೆ (ಪಿ.ಜಿ) ನುಗ್ಗಿ, ಮೊಬೈಲ್ ಸುಲಿಗೆ ಮಾಡಿದ ಆರು ಆರೋಪಿಗಳನ್ನು ಎಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಮುಹಮ್ಮದ್ ನಜಾಶ್ (24), ಸರುಣ್ (38) ಹಾಗೂ ನಗರದ ನಿವಾಸಿಗಳಾದ ವಿಷ್ಣು ಕೆ.ಟಿ (23), ದಿವಾಕರ್ (34), ಮಧುಕುಮಾರ್ (32), ಕಿರಣ್ (29) ಬಂಧಿತ ಆರೋಪಿಗಳು.

ADVERTISEMENT

ನವೆಂಬರ್ 7ರಂದು ರಾತ್ರಿ ಮಾರತ್ ಹಳ್ಳಿಯ ಪಿ.ಜಿಗೆ ನುಗ್ಗಿದ್ದ ಆರೋಪಿಗಳು, ಯುವತಿಯರ ಬಳಿಯಿದ್ದ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

‘ದೂರುದಾರ ಯುವತಿಗೆ ಟೀ ಅಂಗಡಿಯೊಂದರಲ್ಲಿ ಮುಹಮ್ಮದ್ ನಜಾಶ್ ಪರಿಚಯವಾಗಿತ್ತು. ಬಳಿಕ ಸಲುಗೆ ಬೆಳೆದ ಕಾರಣ ಯುವತಿ ನಜಾಶ್ ಜನ್ಮದಿನ ಆಚರಿಸಲು ‌ತನ್ನ ಪಿ.ಜಿ.ಗೆ ಆಹ್ವಾನಿಸಿದ್ದಳು. ಈ ವೇಳೆ, ಆರೋಪಿ ತನ್ನ ಸ್ಹೇಹಿತನ ಜತೆ ತೆರಳಿದ್ದ. ಮಧ್ಯರಾತ್ರಿ 2 ಗಂಟೆಗೆ 4–5 ಆರೋಪಿಗಳು ಪಿ.ಜಿ. ಬಾಗಿಲು ತಟ್ಟಿದ್ದರು. ಬಾಗಿಲು ತೆರೆಯುತ್ತಿದ್ದಂತೆ ತಾವು ಪೊಲೀಸರು ಎಂದು ಹೇಳಿ, ಗಾಂಜಾ ಇದೆಯೇ ಎಂದು ಬೆದರಿಸಿ, ತಪಾಸಣೆ ಮಾಡಿದ್ದರು. ಯುವತಿಯರ ಬಳಿಯಿದ್ದ ಎರಡು ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡಿದ್ದರು. ಬಳಿಕ ₹5 ಲಕ್ಷ ನಗದು ನೀಡದಿದ್ದರೆ ಮತ್ತೊಮ್ಮೆ ಬರುವುದಾಗಿ ಬೆದರಿಸಿ ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಯುವತಿ ಎಚ್ಎಎಲ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕೃತ್ಯದಲ್ಲಿ ಯುವತಿಯ ಪರಿಚಿತ ನಜಾಶ್‌ನ ಕೈವಾಡ ಇರುವುದು ಗೊತ್ತಾಗಿದೆ. ಹಣಕ್ಕಾಗಿ ಕೃತ್ಯವೆಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

ಆರೋಪಿಗಳ ಪೈಕಿ ಸರುಣ್ ಹಿಂದೆ ಮಧುಬಲೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.