ಬೆಂಗಳೂರು: ‘ಬೆಂಗಳೂರಿನ ಕಥೆ: ಸಮತೋಲನ ಬೆಳವಣಿಗೆ, ಸುಸ್ಥಿರತೆ ಮತ್ತು ಒಳಗೊಳ್ಳುವಿಕೆ’ ದುಂಡುಮೇಜಿನ ಸಭೆಯನ್ನು ನೀತಿ ಆಯೋಗದೊಂದಿಗೆ ಜನಾಗ್ರಹ ಸಂಸ್ಥೆಯು ಸೋಮವಾರ ನಡೆಸಿತು.
ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ವಲಸಿಗರಿಗೆ ಸ್ವಾಗತ ನೀಡುವ ಮನೋಭಾವವು ಬೆಂಗಳೂರಿನ ಬೆಳವಣಿಗೆ ದೇಶದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಗುರುತಾಗಿದೆ. ಈ ಬೆಳವಣಿಗೆಯ ಜೊತೆಗೆ ಯೋಜಿತ ನಗರವನ್ನಾಗಿ ಮಾಡಬೇಕಿದೆ ಎಂದು ಉದ್ಯಮಿಗಳು ಸಲಹೆ ನೀಡಿದರು.
ಎರಡು ದಶಕಗಳಲ್ಲಿ ನಗರ ಬೆಳೆದ ರೀತಿ, ಮುಂದೆ ಎಲ್ಲರನ್ನೂ ಒಳಗೊಂಡು ಬೆಳೆಯಬೇಕಿರುವ ದಾರಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಅತಿವೇಗದಿಂದ ಬೆಳೆಯುತ್ತಿರುವ ನಗರದಿಂದ ಮುಂದೆ ಉಂಟಾಗಬಹುದಾದ ಅಪಾಯಗಳು ಮತ್ತು ಅವಕಾಶಗಳೆರಡರ ಬಗ್ಗೆಯೂ ಚಿಂತನೆ ನಡೆಸಲಾಯಿತು. ವಾಸಯೋಗ್ಯ ನಗರವನ್ನಾಗಿ ಉಳಿಸಿಕೊಳ್ಳಲು ಮತ್ತು ಪೋಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಲಹೆಗಳನ್ನು ನೀಡಲಾಯಿತು.
ಉದ್ಯಮ, ಬಂಡವಾಳ, ಲೋಕೋಪಕಾರ ಮತ್ತು ನಾಗರಿಕ ಸಮಾಜದ ವಿವಿಧ ವರ್ಗಗಳನ್ನು ಪ್ರತಿನಿಧಿಸುವ 18 ಹಿರಿಯ ಪಾಲುದಾರರು ಭಾಗವಹಿಸಿದ್ದರು.
ನೀತಿ ಆಯೋಗದ ಉಪಾಧ್ಯಕ್ಷರಾದ ಸುಮನ್ ಬೇರಿ, ಜನಾಗ್ರಹ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ್ ವಿಶ್ವನಾಥನ್, ಕರ್ನಾಟಕ ಪರಿವರ್ತನಾ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ವಿ. ರಾಜೀವ್ ಗೌಡ, ವಿವಿಧ ಸಂಸ್ಥೆಗಳ ಪ್ರಮುಖರಾದ ವೈತೀಶ್ವರನ್ ಎಸ್., ಲಕ್ಷ್ಮೀನಾರಾಯಣ, ರೇವತಿ ಅಶೋಕ್, ನಾರಾಯಣ ರಾಮಚಂದ್ರನ್, ಶ್ರುತಿ ಶಿಬುಲಾಲ್, ಮದನ್ ಪದಕಿ, ದಿನೇಶ್ ಪೈ, ಗಾಯತ್ರಿ ವಾಸುದೇವನ್, ಮಾಲಿನಿ ಗೋಯಲ್, ನಾರಾಯಣ ಪಿ.ಎಸ್. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.