ADVERTISEMENT

ಬಾಂಗ್ಲಾ ಮಹಿಳೆ ಕೊಲೆ: ದೇಹದ ಮೇಲೆ ಗಾಯ, ಗರ್ಭಪಾತ

ಮಾದರಿ ಎಫ್‌ಎಸ್‌ಎಲ್‌ಗೆ ರವಾನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 23:30 IST
Last Updated 26 ಜನವರಿ 2025, 23:30 IST
<div class="paragraphs"><p> ಗರ್ಭಪಾತ ಪ್ರಕರಣ ( ಸಾಂಕೇತಿಕ ಚಿತ್ರ)</p></div>

ಗರ್ಭಪಾತ ಪ್ರಕರಣ ( ಸಾಂಕೇತಿಕ ಚಿತ್ರ)

   

ಬೆಂಗಳೂರು: ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಕೆರೆ ಬಳಿಯ ನಿರ್ಜನ ಪ್ರದೇಶದಲ್ಲಿ ಕೊಲೆಯಾಗಿರುವ ಬಾಂಗ್ಲಾದೇಶದ 28 ವರ್ಷದ ಮಹಿಳೆಯ ದೇಹದ ಮೇಲೆ ಗಾಯಗಳ ಗುರುತುಗಳು ಕಂಡುಬಂದಿದ್ದು, ಗರ್ಭಪಾತವಾಗಿತ್ತು ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ.

ಕಲ್ಕೆರೆ ಕೆರೆ ಬಳಿಯ ನಿರ್ಜನ ಪ್ರದೇಶದಲ್ಲಿ ಶುಕ್ರವಾರ ಸಂತ್ರಸ್ತೆಯ ಶವ ನಗ್ನಾವಸ್ಥೆಯಲ್ಲಿ ಪತ್ತೆಯಾಗಿತ್ತು. ಮಹಿಳೆಯ ಪತಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  

ADVERTISEMENT

‘ಪ್ರಕರಣ ಸಂಬಂಧ ಪತಿ, ಸಹೋದರ, ಸಂಬಂಧಿಕರು ಹಾಗೂ ಕೃತ್ಯ ನಡೆದ ಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿರುವ ಗ್ಯಾರೇಜ್, ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುತ್ತಿರುವವರ ವಿಚಾರಣೆ ಮಾಡಲಾಗಿದೆ. ಈವರೆಗೂ  25 ಜನರ ವಿಚಾರಣೆ ಮಾಡಿ, ಮಾಹಿತಿ ಕಲೆಹಾಕಲಾಗಿದೆ. ಮಹಿಳೆಯ ಮೊಬೈಲ್ ಕರೆಗಳ ವಿವರ (ಸಿಡಿಆರ್) ಪರಿಶೀಲನೆ ನಡೆಯುತ್ತಿದೆ. ಕಡೆಯ ಬಾರಿಗೆ ಆಕೆಗೆ ಯಾರು ಕರೆ ಮಾಡಿದ್ದರು? ಎಲ್ಲಿಂದ ಕರೆ ಬಂದಿದೆ? ಮತ್ತು ಅವರೊಂದಿಗೆ ಯಾರು ಸಂಪರ್ಕದಲ್ಲಿ ಇದ್ದರು? ಎಂಬದುನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

‘ಮಹಿಳೆಯ ದೇಹದ ಮೇಲೆ ಗಾಯದ ಗುರುತುಗಳು, ಗುಪ್ತಾಂಗದಲ್ಲಿ ರಕ್ತಸ್ರಾವ ಆಗಿರುವುದು ಮತ್ತು ಕೆಲ ದಿನಗಳ ಹಿಂದೆ ಆಕೆಗೆ ಗರ್ಭಪಾತವಾಗಿರುವ ಬಗ್ಗೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೊಲೆಗೆ ಮುನ್ನ ಆಕೆಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ವೇಳೆ ಸಂಗ್ರಹಿಸಿದ್ದ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎಂಬುದು ಗೊತ್ತಾಗಲಿದೆ’ ಎಂದು ಹೇಳಿದರು.

‘ದುಷ್ಕರ್ಮಿಗಳ ಪತ್ತೆಗೆ ಮೂರು ತಂಡ ರಚಿಸಿ, ಒಂದೊಂದು ತಂಡಕ್ಕೂ ಪ್ರತ್ಯೇಕ ಕೆಲಸ ವಹಿಸಲಾಗಿದೆ. ಒಂದು ತಂಡ ಘಟನಾ ಸ್ಥಳದ ಸುತ್ತಮುತ್ತಲ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ನಡೆಸುತ್ತಿದೆ. ಮತ್ತೊಂದು ತಂಡ ಮೊಬೈಲ್ ಕರೆಗಳ ವಿವರ (ಸಿಡಿಆರ್‌) ಸಂಗ್ರಹಿಸಿ ವಿಶ್ಲೇಷಣೆಯಲ್ಲಿ ತೊಡಗಿದೆ. ಮೂರನೇ ತಂಡವು ಮೃತ ಮಹಿಳೆಯ ಕುಟುಂಬದ ಸದಸ್ಯರು, ಪರಿಚಿತರ, ಸಂಬಂಧಿಕರ ಮಾಹಿತಿ ಸಂಗ್ರಹಿಸಿ ವಿಚಾರಣೆ ನಡೆಸುತ್ತಿದೆ’ ಎಂದು ವಿವರಿಸಿದರು.

ಕೊತ್ತನೂರು ಬಳಿ ಬಾಡಿಗೆ ಮನೆಯೊಂದರಲ್ಲಿ ಪತಿ ಹಾಗೂ ಸಹೋದರನ ಜತೆಗೆ ವಾಸವಿದ್ದ ಮಹಿಳೆ, ಕಲ್ಕೆರೆಯ ಅಪಾರ್ಟ್‌ವೊಂದರಲ್ಲಿ ಮನೆಗೆಲಸ ಮಾಡುತ್ತಿದ್ದರು. ಎಂದಿನಂತೆ ಗುರುವಾರ ಸಹ ಕೆಲಸಕ್ಕೆ ತೆರಳಿದ್ದರು. ರಾತ್ರಿ ವಾಪಸ್ ಬಂದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.