ಬೆಂಗಳೂರು: ಮಸ್ಕತ್ನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ನಗರದ ಬ್ಯಾಂಕ್ ಉದ್ಯೋಗಿಯೊಬ್ಬರಿಂದ ₹ 15.30 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ವೈಟ್ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಂತಿನಿಕೇತನ ಲೇಔಟ್ನ 33 ವರ್ಷದ ನಿವಾಸಿ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿಗಳಾದ ಆದಿತ್ಯ, ಅಭಿಷೇಕ್ ಸಿಂಗ್, ರಾಜೀವ್ ಹಾಗೂ ಗೌತಮ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
‘ನಗರದ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿರುವ ದೂರುದಾರ, ವಿದೇಶದಲ್ಲಿರುವ ಬ್ಯಾಂಕ್ನಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ನೌಕರಿ ಡಾಟ್ ಕಾಮ್ ಜಾಲತಾಣದಲ್ಲಿ ರಿಸ್ಯುಮೆ ಅಪ್ಲೋಡ್ ಮಾಡಿದ್ದರು. ಜಾಲತಾಣದ ಪ್ರತಿನಿಧಿಗಳ ಸೋಗಿನಲ್ಲಿ ಕರೆ ಮಾಡಿದ್ದ ಆರೋಪಿಗಳು, ‘ಮಸ್ಕತ್ನ ಬ್ಯಾಂಕೊಂದರಲ್ಲಿ ಕೆಲಸ ಖಾಲಿ ಇದ್ದು, ಲಕ್ಷಾಂತರ ರೂಪಾಯಿ ಸಂಬಳವಿದೆ. ಅದೇ ಹುದ್ದೆಗೆ ನಿಮ್ಮನ್ನು ಆಯ್ಕೆ ಮಾಡಲಾಗಿದೆ. ಬೇಗನೇ ದಾಖಲೆ ಸಮೇತ ಮಸ್ಕತ್ಗೆ ಹೋಗಿ ಕರ್ತವ್ಯಕ್ಕೆ ಹಾಜರಾಗಿ’ ಎಂದು ಹೇಳಿದ್ದರು’ ಎಂದು ಪೊಲೀಸರು ಹೇಳಿದರು.
‘ಕೆಲ ದಿನ ಬಿಟ್ಟು ಪುನಃ ಕರೆ ಮಾಡಿದ್ದ ಆರೋಪಿಗಳು, ‘ಕೆಲಸಕ್ಕೆ ಸೇರಬೇಕಾದರೆ ನೋಂದಣಿ, ಜಿಎಸ್ಟಿ ಸೇರಿದಂತೆ ಹಲವು ಶುಲ್ಕಗಳನ್ನು ಪಾವತಿಸಬೇಕು’ ಎಂದಿದ್ದರು. ಅದನ್ನು ನಂಬಿದ್ದ ದೂರುದಾರ, ಆರೋಪಿಗಳು ಹೇಳಿದ್ದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹ 15.30 ಲಕ್ಷ ಜಮೆ ಮಾಡಿದ್ದರು. ಅದಾದ ನಂತರ ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.