ಬೆಂಗಳೂರು: ‘ಉದ್ಯಾನನಗರಿ ಬೆಂಗಳೂರಿಗೆ ದೇಶದಾದ್ಯಂತ ಜನರು ವಲಸೆ ಬರುತ್ತಿದ್ದು, ಸಂಚಾರ ದಟ್ಟಣೆಯಿಂದ ಹಸಿರುಪ್ರಮಾಣ ಕುಸಿಯುತ್ತಿದೆ’ ಎಂದು ನಟ ಮಿಲಿಂದ್ ಸೋಮನ್ ಆತಂಕ ವ್ಯಕ್ತಪಡಿಸಿದರು.
ಬ್ಯಾಂಕ್ ಆಫ್ ಬರೋಡಾ ಪರಿಸರ ಸ್ನೇಹಿ ಸಾರಿಗೆಯನ್ನು ಪ್ರೋತ್ಸಾಹಿಸಲು ‘ಗ್ರೀನ್ ರೈಡ್- ಸ್ವಚ್ಛ ವಾತಾವರಣದತ್ತ ಒಂದು ಹೆಜ್ಜೆ’ ಎಂಬ ಅಭಿಯಾನದ 2ನೇ ಆವೃತ್ತಿಯನ್ನು ಡಿ. 19ರಂದು ಮುಂಬೈನಲ್ಲಿ ಚಾಲನೆ ನೀಡಲಾಗಿತ್ತು. ಈ ಅಭಿಯಾನದ ಭಾಗವಾಗಿ ಅವರು ಮುಂಬೈನಿಂದ ಬೆಂಗಳೂರಿಗೆ 1,400 ಕಿ.ಮೀ ಸೈಕಲ್ ಸವಾರಿ ಮಾಡಿಕೊಂಡು ಭಾನುವಾರ ಟ್ರಿನಿಟಿ ಬ್ಯಾಂಕ್ನ ಪ್ರಾದೇಶಿಕ ಕಚೇರಿಗೆ ಬಂದು ಗಿಡ ನೆಡುವುದರ ಮೂಲಕ ಮುಕ್ತಾಯಗೊಳಿಸಿದರು.
‘ಎಲ್ಲರೂ ಸುಸ್ಥಿರ ಮತ್ತು ಪರಿಸರ ಸ್ನೇಹಿ ಸಾರಿಗೆ ಮಾದರಿಗಳನ್ನು ಹೆಚ್ಚು ಉಪಯೋಗಿಸಬೇಕು’ ಎಂದು ಕರೆ ನೀಡಿದರು.
ಬ್ಯಾಂಕ್ ಆಫ್ ಬರೋಡದ ವಲಯ ಮುಖ್ಯಸ್ಥ ಮತ್ತು ಜನರಲ್ ಮ್ಯಾನೇಜರ್ ಸುಧಾಕರ ಡಿ. ನಾಯಕ್ ಮಾತನಾಡಿ, ‘ಪ್ರತಿಯೊಬ್ಬರು ಪರಿಸರವನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಪ್ರತಿ ಹೆಜ್ಜೆಯೂ ಸುಸ್ಥಿರ ಜೀವನ ಶೈಲಿಯತ್ತ ತೆಗೆದುಕೊಂಡು ಹೋಗುತ್ತಿದ್ದು, ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡಬಲ್ಲದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.