ಬೆಂಗಳೂರು: ‘ಅನುರುದ್ಧಿ ಕ್ರೆಡಿಟ್ ಕೋ–ಆಪರೇಟಿವ್ ಬ್ಯಾಂಕಿಗೆ ನುಗ್ಗಿದ್ದ ತೃತೀಯ ಲಿಂಗಿಗಳ ಗುಂಪೊಂದು ಚಿನ್ನದ ಸರ ಹಾಗೂ ₹1.65 ಲಕ್ಷ ನಗದು ಕದ್ದುಕೊಂಡು ಪರಾರಿಯಾಗಿದೆ’ ಎಂದು ಆರೋಪಿಸಿ ಬ್ಯಾಂಕ್ನ ವ್ಯವಸ್ಥಾಪಕಿ ಮಂಗಳಗೌರಿ ಅರಸ್ ಅವರು ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದಾರೆ.
‘ಸೆ. 23ರಂದು ನಡೆದಿರುವ ಕೃತ್ಯ ಸಂಬಂಧ ಶಿಕ್ಷಕರ ಲೇಔಟ್ನ ನಿವಾಸಿ ಮಂಗಳಗೌರಿ ದೂರು ನೀಡಿದ್ದಾರೆ. ನಾಲ್ವರು ತೃತೀಯ ಲಿಂಗಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ವಿದ್ಯಾರಣ್ಯಪುರ ಈಚಲಮರ ಬಸ್ ತಂಗುದಾಣ ಸಮೀಪ ಹೊಸದಾಗಿ ಬ್ಯಾಂಕ್ ಆರಂಭಿಸಲಾಗಿದೆ. ಸೆ. 23ರಂದು ಬೆಳಿಗ್ಗೆ ಕಚೇರಿ ಉದ್ಘಾಟಿಸಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ 12.30ರ ಸುಮಾರಿಗೆ ಭಿಕ್ಷೆ ಕೇಳುವ ನೆಪದಲ್ಲಿ ಬ್ಯಾಂಕ್ಗೆ ಬಂದಿದ್ದ ನಾಲ್ವರು ತೃತೀಯ ಲಿಂಗಿಗಳು, ದೃಷ್ಟಿ ತೆಗೆಯುವುದಾಗಿ ಹೇಳಿದ್ದರು.’
‘ದೇವರ ಪೂಜೆ ನಡೆಸಿದ್ದ ಸ್ಥಳಕ್ಕೆ ಹೋಗಿದ್ದ ಆರೋಪಿಗಳು, ಅಕ್ಷತೆ ಹಾಕಿದ್ದರು. ಅದೇ ವೇಳೆಯೇ ಪೂಜೆಗೆ ಇಟ್ಟಿದ್ದ 23 ಗ್ರಾಂ ಚಿನ್ನದ ಸರ ಹಾಗೂ ₹ 1.65 ಲಕ್ಷ ನಗದು ಕದ್ದಿದ್ದಾರೆ. ಕೆಲ ನಿಮಿಷಗಳಲ್ಲಿ ಬ್ಯಾಂಕ್ನಿಂದ ಹೊರಬಂದು ಆಟೊದಲ್ಲಿ ಪರಾರಿಯಾಗಿದ್ದಾರೆ. ಈ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.