ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಕೆನಡಾದ ಮ್ಯಾನಿಟೋಬಾ ವಿಶ್ವವಿದ್ಯಾಲಯದ ಪ್ರೊಫೆಸರ್ ಬಿ.ಎಂ ರಮೇಶ್ ಅವರಿಗೆ ‘ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರ - 2024’ ನೀಡಿ ಗೌರವಿಸಲಾಯಿತು.
ಬೆಂಗಳೂರು: ‘ಬನ್ನಂಜೆ ಗೋವಿಂದಾಚಾರ್ಯರ ಅನುವಾದ ಸಾಹಿತ್ಯವು ಶಬ್ದಾನುವಾದ ಆಗಿರದೆ, ಭಾವಾನುವಾದ ಆಗಿರುತ್ತಿತ್ತು. ಹೀಗಾಗಿ ಮೂಲ ಸಾಹಿತ್ಯದಲ್ಲಿ ಇರುತ್ತಿದ್ದ ಭಾಷೆಯ ಸೊಗಡು, ಅನುವಾದ ಸಾಹಿತ್ಯದಲ್ಲೂ ಇರುತ್ತಿತ್ತು’ ಎಂದು ಶಕ್ಷಣ ತಜ್ಞ ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ‘ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರ–2024’ ಅನ್ನು ಪ್ರದಾನ ಮಾಡಿ ಅವರು ಮಾತನಾಡಿದರು. ‘ಆಚಾರ್ಯರು ಯಾವುದೇ ಕೃತಿಯನ್ನು ಅನುವಾದಿಸಿದರೂ, ಅಲ್ಲೊಬ್ಬ ಸಂಶೋಧಕ ಜಾಗೃತನಾಗಿರುತ್ತಿದ್ದ. ಈ ಮೂಲಕ ಅನುವಾದ ಕೃತಿಗಳಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿಕೊಳ್ಳುತ್ತಿದ್ದರು ಮತ್ತು ಅವುಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು’ ಎಂದರು.
‘ಸಮಾಜದಲ್ಲಿ ಈಗಾಗಲೇ ಜನಪ್ರಿಯವಾಗಿರುವ ಕತೆಗಳನ್ನು, ಸಂಕಥನಗಳನ್ನು ಪ್ರಶ್ನಿಸಲು ಧೈರ್ಯಬೇಕು. ಬನ್ನಂಜೆ ಅವರು ಆ ಕೆಲಸ ಮಾಡುತ್ತಿದ್ದರು. ಕನಕದಾಸರಿಗೆ ಸಂಬಂಧಿಸಿದ ಕನಕನ ಕಿಂಡಿ ಕತೆಯನ್ನು ಅವರು ಇದೇ ರೀತಿ ಪ್ರಶ್ನಿಸಿದ್ದರು’ ಎಂದರು.
ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಸಂಶೋಧಕ ಮತ್ತು ಅನುವಾದಕ ಬಿ.ಎಂ.ರಮೇಶ್, ‘ಒಂದು ಮೂಲಕೃತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು ಎಂದಾದರೆ, ಅದಕ್ಕೆ ಅನುವಾದಕ್ಕಿಂತ ಸೂಕ್ತವಾದ ಮಾರ್ಗ ಇನ್ನೊಂದಿಲ್ಲ. ಈ ಕಾರಣದಿಂದಲೇ ಸಂಸ್ಕೃತ ಭಾಷೆಯಲ್ಲಿದ್ದ ಮೂಲ ಮಹಾಭಾರತವನ್ನು ಕನ್ನಡಕ್ಕೆ ಅನುವಾದಿಸಲು ಆರಂಭಿಸಿದೆ. ಮಾತೃಭಾಷೆಯಲ್ಲಿ ವಿಷಯ ವರ್ಣನೆ ಸಾಧ್ಯವಾದಷ್ಟು ಇತರ ಭಾಷೆಯಲ್ಲಿ ಸಾಧ್ಯವಾಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.