ADVERTISEMENT

‘ಮಾಫಿಯಾ ಜತೆ ನಂಟು ಕೂಡದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

ಪೊಲೀಸ್‌ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಕೀತು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 19:31 IST
Last Updated 6 ಸೆಪ್ಟೆಂಬರ್ 2021, 19:31 IST
ಬೆಂಗಳೂರಿನ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಐಪಿಎಸ್‌ ಅಧಿಕಾರಿಗಳ ಸಮ್ಮೇಳನ ಉದ್ಘಾಟಿಸಲು ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಐಪಿಎಸ್‌ ಅಧಿಕಾರಿಗಳು ಸಲ್ಯೂಟ್‌ನೊಂದಿಗೆ ಸ್ವಾಗತಿಸಿದರು. ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ಗೃಹ ಸಚಿವ ಆರಗ ಜ್ಞಾನೇಂದ್ರ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡ.ರಜನೀಶ್ ಗೋಯಲ್‌ ಜತೆಗಿದ್ದರು
ಬೆಂಗಳೂರಿನ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಐಪಿಎಸ್‌ ಅಧಿಕಾರಿಗಳ ಸಮ್ಮೇಳನ ಉದ್ಘಾಟಿಸಲು ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಐಪಿಎಸ್‌ ಅಧಿಕಾರಿಗಳು ಸಲ್ಯೂಟ್‌ನೊಂದಿಗೆ ಸ್ವಾಗತಿಸಿದರು. ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ಗೃಹ ಸಚಿವ ಆರಗ ಜ್ಞಾನೇಂದ್ರ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡ.ರಜನೀಶ್ ಗೋಯಲ್‌ ಜತೆಗಿದ್ದರು   

ಬೆಂಗಳೂರು: ಭೂಗಳ್ಳರು, ಮರಳು ಕಳ್ಳಸಾಗಣೆದಾರರು ಸೇರಿ ಯಾವುದೇ ಮಾಫಿಯಾಗಳ ಜತೆ ಪೊಲೀಸರು ನಂಟು ಇರಿಸಿಕೊಳ್ಳವುದನ್ನು ತಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಸೋಮವಾರ ನಡೆದ ಐಪಿಎಸ್‌ ಅಧಿಕಾರಿಗಳ ಸಮ್ಮೇಳನ ಉದ್ಘಾಟಿಸಿ, ಪೊಲೀಸ್‌ ಇಲಾಖೆಯ ಕಾರ್ಯವೈಖರಿ ಕುರಿತು ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಮತ್ತು ಅವರ ಏಜೆಂಟರ ಜತೆ ಪೊಲೀಸರ ನಂಟು ಇರಕೂಡದು ಎಂದು ತಾಕೀತು ಮಾಡಿದ್ದೇನೆ’ ಎಂದರು.

ಬೆಂಗಳೂರು ನಗರ ಮತ್ತು ಸುತ್ತ
ಮುತ್ತ ಭೂಗಳ್ಳರ ಮಾಫಿಯಾ ಜೋರಾಗಿ ಕೆಲಸ ಮಾಡುತ್ತಿದೆ. ಭೂಕಬಳಿಕೆ ಮಾಡುವವರ ಜತೆ ಕೈ ಜೋಡಿಸದಂತೆ ಪೊಲೀಸರಿಗೆ ಸೂಚಿಸಲಾಗಿದೆ. ರಾಜ್ಯದ ವಿವಿಧೆಡೆ ಮರಳು ಕಳ್ಳಸಾಗಣೆಯೂ ನಡೆಯುತ್ತಿರುವ ಆರೋಪವಿದೆ. ಮರಳು ಕಳ್ಳಸಾಗಣೆ ಮಾಡುವವರಿಗೆ ಪೊಲೀಸರು ಸಹಕಾರ ನೀಡಬಾರದು ಎಂಬ ನಿರ್ದೇಶನವನ್ನೂ ನೀಡಲಾಗಿದೆ ಎಂದು ಹೇಳಿದರು.

ADVERTISEMENT

ಅಪರಾಧ ಪ್ರಕರಣಗಳ ತನಿಖೆಯಲ್ಲಿ ಯಾವುದೇ ರೀತಿಯಲ್ಲೂ ರಾಜಿ ಆಗ
ಬಾರದು. ಸೈಬರ್‌ ಅಪರಾಧ, ಡ್ರಗ್ಸ್‌ ಮಾಫಿಯಾ ನಿಯಂತ್ರಣಕ್ಕೆ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ನಿಷ್ಪಕ್ಷಪಾತ ಮತ್ತು ನಿಷ್ಠುರವಾದ ತನಿಖೆಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದರು.

ಪ್ರತ್ಯೇಕ ಡ್ಯಾಶ್‌ ಬೋರ್ಡ್‌: ಇಲಾಖೆಯ ಎಲ್ಲ ಹಂತಗಳಲ್ಲೂ ವರದಿ ಮಾಡುವ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಿದೆ. ನಿತ್ಯ ದಾಖಲಾಗುವ ಪ್ರಕರಣಗಳ ಕುರಿತು ಕಿರಿಯ ಅಧಿಕಾರಿಗಳಿಂದ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದು ಮತ್ತು ಹಿರಿಯ ಅಧಿಕಾರಿ
ಗಳಿಂದ ಸೂಚನೆ, ಆದೇಶ ನೀಡುವ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆ
ಗಳನ್ನು ತರಲು ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

‘ಪೊಲೀಸ್‌ ಮಹಾನಿರ್ದೇಶಕರು, ಎಲ್ಲ ನಗರ ಪೊಲೀಸ್‌ ಕಮಿಷನರ್‌ಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಪ್ರತ್ಯೇಕವಾದ ಡ್ಯಾಶ್‌ ಬೋರ್ಡ್‌ ಹೊಂದಬೇಕು. ಅಪರಾಧ ಪ್ರಕರಣಗಳ ಪಟ್ಟಿ, ಬಂಧನ ಮತ್ತಿತರ ಮಾಹಿತಿಯನ್ನು ನೇರವಾಗಿ ಡ್ಯಾಶ್‌ ಬೋರ್ಡ್‌ನಿಂದಲೇ ಪಡೆದುಕೊಂಡು ಪರಿಶೀಲಿಸಲು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ಜನಸ್ನೇಹಿ ವರ್ತನೆ: ಪೊಲೀಸರು ಜನಸ್ನೇಹಿಯಾಗಿ ವರ್ತಿಸಬೇಕು. ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಕಿರಿಯ ಸಿಬ್ಬಂದಿ ಜೊತೆ ಸೌಜನ್ಯ
ದಿಂದ ವರ್ತಿಸಬೇಕು. ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯನ್ನು ರೂಪಿಸುವು
ದಕ್ಕೆ ಪೂರಕವಾಗಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯ ವರ್ತನೆಯಲ್ಲಿ ಬದಲಾವಣೆ ತರುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ರಾಜ್ಯ ಪೊಲೀಸ್‌ ಇಲಾಖೆ ಕುರಿತ ಕಾಫಿ ಟೇಬಲ್‌ ಪುಸ್ತಕ ಮತ್ತು ಸೇವೆಯಲ್ಲಿದ್ದಾಗ ಮೃತರಾದ ಪೊಲೀಸ್ ಸಿಬ್ಬಂದಿಗೆ ನೀಡಿರುವ ಪರಿಹಾರದ ವಿವರದ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು. ಅಪರಾಧ ಹಿನ್ನೆಲೆಯ ವ್ಯಕ್ತಿಗಳ ಮುಖ ಚಹರೆ ಗುರುತಿಸುವ ‘ಫೇಸ್‌ ರೆಕಗ್ನಿಷನ್‌’ ವ್ಯವಸ್ಥೆಗೆ ಮುಖ್ಯಮಂತ್ರಿ ಚಾಲನೆ ನೀಡಿದರು.

ಪ್ರತ್ಯೇಕ ತಾಂತ್ರಿಕ ವಿಭಾಗ

ಆರ್ಥಿಕ ಮತ್ತು ಸೈಬರ್‌ ಅಪರಾಧ ನಿಯಂತ್ರಣಕ್ಕೆ ಪ್ರತ್ಯೇಕ ತಾಂತ್ರಿಕ ವಿಭಾಗ ರಚಿಸುವಂತೆ ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಆಂತರಿಕ ಭದ್ರತಾ ವಿಭಾಗದ ಬಲವರ್ಧನೆ, ಕರಾವಳಿ ಕಾವಲು ಪಡೆಗೆ ಹೈಸ್ಪೀಡ್‌ ದೋಣಿಗಳ ಖರೀದಿ, ಕಿರಿಯ ಅಧಿಕಾರಿಗಳಿಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ತರಬೇತಿ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆರು ವಿಧಿ ವಿಜ್ಞಾನ ಪ್ರಯೋಗಾಲಯ ಆರಂಭಿಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.