ADVERTISEMENT

ಬಸವೇಶ್ವರ ಸ್ವಾಮಿ ಕಡಲೆಕಾಯಿ ಪರಿಷೆ: ಸೋಂಪುರದಲ್ಲಿ ಇಂದಿನಿಂದ ಆರಂಭ

ರಾಜ್ಯಮಟ್ಟದ ಕುಸ್ತಿ ಪಂದ್ಯ ಆಯೋಜನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 20:20 IST
Last Updated 13 ಜನವರಿ 2023, 20:20 IST
ಬಸವ ಉತ್ಸವದ ಕೈಪಿಡಿಯನ್ನು ದೇವಾಲಯದ ಆಡಳಿತ ಮಂಡಳಿ ಸದಸ್ಯರು ಪ್ರದರ್ಶಿಸಿದರು. ಮುಖಂಡ ರುದ್ರೇಶ್, ಪರಮಶಿವಯ್ಯ ಇದ್ದಾರೆ
ಬಸವ ಉತ್ಸವದ ಕೈಪಿಡಿಯನ್ನು ದೇವಾಲಯದ ಆಡಳಿತ ಮಂಡಳಿ ಸದಸ್ಯರು ಪ್ರದರ್ಶಿಸಿದರು. ಮುಖಂಡ ರುದ್ರೇಶ್, ಪರಮಶಿವಯ್ಯ ಇದ್ದಾರೆ   

ಕೆಂಗೇರಿ: ಸೋಂಪುರ ಬಸವೇಶ್ವರ ಸ್ವಾಮಿ ಕಡಲೆಕಾಯಿ ಪರಿಷೆ ಹಾಗೂ ರಥೋತ್ಸವ ಜ.14 ಮತ್ತು 15ರಂದು ನಡೆಯಲಿದೆ.

ಕೋವಿಡ್‌ ಕಾರಣಕ್ಕಾಗಿ ಮೂರು ವರ್ಷಗಳಿಂದ ಸರಳವಾಗಿ ಕಡಲೆಕಾಯಿ ಪರಿಷೆ ಆಯೋಜಿಸಲಾಗಿತ್ತು. ಪ್ರಸ್ತುತ ಎರಡು ದಿನಗಳ ಕಾಲ ಆಯೋಜಿಸಿರುವ ಪರಿಷೆಯನ್ನು ವಿಜೃಂಭಣೆಯಿಂದ ಆಚರಿಸಲು ದೇವಾಲಯದ ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ.

ಜ.14ರಂದು ರಾಜ್ಯಮಟ್ಟದ ಕುಸ್ತಿ ಪಂದ್ಯ ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ 400ರಿಂದ 500 ಕುಸ್ತಿಪಟುಗಳು ಪಾಲ್ಗೊಳ್ಳಲಿದ್ದಾರೆ. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು. ಹಲವು ಚಲನಚಿತ್ರ ನಟರು ಪರಿಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜ. 15ರಂದು ಬಸವೇಶ್ವರ ಸ್ವಾಮಿ ರಥೋತ್ಸವ ನಡೆಯಲಿದ್ದು, ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

ADVERTISEMENT

‘ಸೋಂಪುರ ಬಸವಣ್ಣ ದೇವಾಲಯ ಚೋಳರ ಕಾಲಕ್ಕೆ ಸೇರಿದೆ. ಸ್ಥಳೀಯರ ಬೆಂಬಲದಿಂದ ಜೀರ್ಣೋದ್ಧಾರಗೊಳಿಸಿ ದಶಕಗಳಿಂದ ಜಾತ್ರಾ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ನೆಲದ ಅಸ್ಮಿತೆ, ಗ್ರಾಮೀಣ ಸೊಗಡು ಹಾಗೂ ಕೃಷಿ ಚಟುವಟಿಕೆ ಉತ್ತೇಜಿಸಲು, ರಕ್ಷಿಸಿಕೊಳ್ಳಲು ಇಂತಹ ಆಚರಣೆಗಳೂ ಸಹಾಯಕವಾಗಿವೆ. ರಥವನ್ನು ಬಿ.ವೈ. ವಿಜಯೇಂದ್ರ ಕುಟುಂಬದವರು ದೇಣಿಗೆಯಾಗಿ ನೀಡಿದ್ದಾರೆ’ ಎಂದು ಕೆಆರ್‌ಐಡಿಎಲ್ ಅಧ್ಯಕ್ಷ ಎಂ. ರುದ್ರೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜ.15ಕ್ಕೆ ನಡೆಯಲಿರುವ ರಥೋತ್ಸವಕ್ಕೆ ವಿಜಯೇಂದ್ರ ಚಾಲನೆ ನೀಡಲಿದ್ದಾರೆ. ಅಂದು ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜಾತ್ರೆ ಬರುವ ಭಕ್ತರಿಗೆ ಗಿಣ್ಣು, ಕಡಲೆಕಾಯಿ ಹಾಗೂ ಪ್ರಸಾದ ವಿನಿ
ಯೋಗ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.