ADVERTISEMENT

ಪ್ರತಿ 50 ಕಿ.ಮೀ. ರಸ್ತೆ ನಿರ್ವಹಣೆಗೆ ಒಂದು ತಂಡ

​ಪ್ರಜಾವಾಣಿ ವಾರ್ತೆ
Published 9 ಮೇ 2019, 19:52 IST
Last Updated 9 ಮೇ 2019, 19:52 IST
   

ಬೆಂಗಳೂರು: ಮಳೆ–ಗಾಳಿಯಿಂದ ಬೀಳುವ ಮರಗಳನ್ನು ತಕ್ಷಣ ತೆರವು ಮಾಡಲು, ಕಸದಿಂದ ಬಂದ್ ಆಗುವ ಚರಂಡಿಗಳನ್ನು ಶುಚಿಗೊಳಿಸಿ ಮಳೆನೀರಿಗೆ ದಾರಿ ಮಾಡಲು ಬಿಬಿಎಂಪಿಯು ಎಂಜಿನಿಯರ್‌ಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿದೆ.

ಮಳೆಯಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಬಗೆಹರಿಸಲು ಪಾಲಿಕೆಯು ಸದ್ಯ ಮಾಡಿಕೊಂಡಿರುವ ತಯಾರಿ ಕುರಿತು ಆಯುಕ್ತ ಎನ್‌.ಮಂಜುನಾಥ ಪ್ರಸಾದ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

‘ಪಾಲಿಕೆಯ ಮುಖ್ಯ ರಸ್ತೆಗಳ ನಿರ್ವಹಣಾ ವಿಭಾಗದ ಸಹಾಯಕ ಕಾರ್ಯನಿರ್ವಹಣಾ ಎಂಜಿನಿಯರ್‌ಗಳ(ಎಇಇ) ನೇತೃತ್ವದಲ್ಲಿ 24 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಕ್ಕೂ ಮುಖ್ಯರಸ್ತೆಗಳ 50 ಕಿ.ಮೀ. ಉದ್ದದ ಪ್ರದೇಶ ಹಂಚಿಕೆ ಮಾಡಲಾಗಿದೆ. ಬಿದ್ದ ಮರಗಳನ್ನು ತೆರವು ಮಾಡುವ, ಚರಂಡಿಗಳಲ್ಲಿ ತುಂಬಿಕೊಂಡ ಕಸ ತೆಗೆಯುವ 10ರಿಂದ 15 ಸಿಬ್ಬಂದಿಪ್ರತಿ ತಂಡದಲ್ಲೂ ಇರುತ್ತಾರೆ’ ಎಂದು ಅವರು ಹೇಳಿದರು.

ADVERTISEMENT

‘ಮಳೆಯಿಂದ ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚು ಮರಗಳು ಬಿದ್ದರೆ ಅಥವಾ ಅವಘಡ ಸಂಭವಿಸಿದರೆ, ಹೆಚ್ಚು ಹಾನಿ ಸಂಭವಿಸದ ಪ್ರದೇಶದ ತಂಡ ಅಲ್ಲಿಗೆ ಬಂದು ನೆರವಾಗಲಿದೆ’ ಎಂದು ಹೇಳಿದರು.

‘ರಸ್ತೆಗಳಲ್ಲಿ ಬಿದ್ದ ಕಸ ಗುಡಿಯಲು ಸದ್ಯ ಕಸ ಗುಡಿಸುವ9 ಯಂತ್ರಗಳಿವೆ. ಈಗಾಗಲೇ ಮಾಡಿಕೊಂಡಿರುವ ಒಪ್ಪಂದದಂತೆ 15 ದಿನಗಳೊಳಗೆ ಇನ್ನೂ 17 ಯಂತ್ರಗಳು ಕಾರ್ಯಾಚರಣೆಗೆ ಇಳಿಯಲಿವೆ’ ಎಂದು ಅವರು ತಿಳಿಸಿದರು.

*

ಮಂಗಳವಾರ ಇದ್ದಕ್ಕಿದ್ದಂತೆ ಹಲವೆಡೆ 15 ಸೆಂ.ಮೀ.ವರೆಗೂ ಸುರಿಯಿತು. ಹಾಗಾಗಿ ಮರಗಳು ಬಿದ್ದು, ಜನರು ತೊಂದರೆ ಅನುಭವಿಸಿದರು.

ಎನ್‌.ಮಂಜುನಾಥ ಪ್ರಸಾದ್, ಆಯುಕ್ತ, ಬಿಬಿಎಂಪಿ
*

ಅಂಕಿ–ಅಂಶ

70

ಮಂಗಳವಾರದ ಮಳೆಗೆ ಬಿದ್ದ ಮರಗಳು

160

ಬಿದ್ದ ದೊಡ್ಡ ಕೊಂಬೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.