ಬೆಂಗಳೂರು: 'ಮೇಯರ್ ಎಂ.ಗೌತಮ್ ಕುಮಾರ್ ಹಾಗೂ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ನಡುವೆ ಹೊಂದಣಿಕೆ ಇಲ್ಲದೇ ಬಿಬಿಎಂಪಿ ಆಡಳಿತ ಕುಸಿತ ಕಂಡಿದೆ' ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಆರೋಪ ಮಾಡಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇಯರ್ ಅವರ ಮೊದಲ 100 ದಿನಗಳ ಆಡಳಿತ ಆಮೆಗತಿಯಲ್ಲಿ ಸಾಗಿದೆ. ಮೂರು ಬಾರಿ ಕೌನ್ಸಿಲ್ ಸಭೆಗಳನ್ನು ಕರೆಯಲಾಗಿದ್ದಾದರೂ ಅವುಗಳು ಸಮರ್ಪಕವಾಗಿ ನಡೆದಿಲ್ಲ. ನಾಲ್ಕು ಕಡೆ ಸ್ಥಳ ಪರಿಶೀಲನೆ ನಡೆಸಿದ್ದು ಹಾಗೂ ಐದು ಬಾರಿ ಕಚೇರಿಯಲ್ಲಿ ಸಭೆ ನಡೆಸಿದ್ದು ಬಿಟ್ಟರೆ ಬೇರಾವ ಸಾಧನೆಯನ್ನೂ ಮೇಯರ್ ಮಾಡಿಲ್ಲ. 2020-21ನೇ ಸಾಲಿನ ಬಿ.ಬಿ.ಎಂ.ಪಿ. ಬಜೆಟ್ ಬಗ್ಗೆ ಪೂರ್ವತಯಾರಿ ಸಭೆಗಳೂ ನಡೆಸಿಲ್ಲ’ ಎಂದರು.
‘ಹಸಿ ಮತ್ತು ಒಣ ಕಸ ವಿಂಗಡನೆಗೆ ಮತ್ತು ವಿಲೇವಾರಿ ಕ್ರಮ ಕೈಗೊಂಡಿಲ್ಲ. ಪ್ಲಾಸ್ಚಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ನಮ್ಮ ಆಡಳಿತಾವಧಿಯಲ್ಲಿ ನಗರದಲ್ಲಿ ಹೊರಾಂಗಣ ಜಾಹಿರಾತು ನಿಷೇಧಕ್ಕೆ ಕ್ರಮ ಕೈಗೊಂಡಿದ್ದೆವು. ಆದರೆ, ಈಗ ಮತ್ತೆ ಹಿಂಬಾಗಿಲಿಂದ ಜಾಹಿರಾತು ಮಾಫಿಯಕ್ಕೆ ಮತ್ತೆ ಅವಕಾಶ ನೀಡಲು ಸದ್ದಿಲ್ಲದೇ ಸಿದ್ಧತೆ ನಡೆದಿದೆ’ ಎಂದು ದೂರಿದರು.
‘ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಮ್ಮ ನಗರವು ಕ್ಷಿಪ್ರ ವೇಗದಲ್ಲಿ ಬೆಳೆಯುತ್ತಿದೆ. ಆ ವೇಗಕ್ಕೆ ಅನುಗುಣವಾಗಿ ಬಿಬಿಎಂಪಿ ಆಡಳಿತ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.