ಬೆಂಗಳೂರು: ನಗರದ ಸುಂಕದಕಟ್ಟೆ ಶ್ರೀಗಂಧದ ಕಾವಲು ಸಮೀಪದ ಪೂರ್ಣಚಂದ್ರ ಬಡಾವಣೆಯಲ್ಲಿ ಎರಡು ತಿಂಗಳಿನಿಂದ ಮರದ ಕೊಂಬೆಯೊಂದು ರಸ್ತೆಯ ಮೇಲೆ ಬೀಳುವ ಸ್ಥಿತಿಯಲ್ಲಿ ಇದ್ದು, ಬೆಸ್ಕಾಂ ಮತ್ತು ಬಿಬಿಎಂಪಿಗಳ ಸಮನ್ವಯದ ಕೊರತೆಯಿಂದ ರೆಂಬೆಯನ್ನು ತೆರವುಗೊಳಿಸುವ ಕೆಲಸ ಆಗಿಲ್ಲ.
ಬಡಾವಣೆಯ 5ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆಯಲ್ಲಿ ಮರವೊಂದರ ಕೊಂಬೆ ಮೇ 23ರಂದು ಬೀಸಿದ ಭಾರಿ ಗಾಳಿಗೆ ಮುರಿದು ಪಕ್ಕದ ಮನೆಗೆ ತಾಗಿ ನಿಂತಿತ್ತು. ಮುರಿದ ಕೊಂಬೆ ಕೆಳಗೆ ಬಿದ್ದಿದ್ದರೆ ವಿದ್ಯುತ್ ಕಂಬಗಳು ಮುರಿದು ಹೋಗುತ್ತಿದ್ದವು, ಜನರು, ವಾಹನಗಳಿಗೆ ತೊಂದರೆ ಆಗಿಬಿಡುತ್ತಿತ್ತು.
ಅಂದು ಯಾವ ಸ್ಥಿತಿಯಲ್ಲಿ ಮರದ ಕೊಂಬೆ ಇತ್ತೋ, ಎರಡು ತಿಂಗಳ ಬಳಿಕವೂ ಅದೇ ಸ್ಥಿತಿಯಲ್ಲಿ ಕೊಂಬೆ ಇದೆ. ಇನ್ನೊಮ್ಮೆ ಬಲವಾಗಿ ಗಾಳಿ ಬೀಸಿದರೆ ಮುರಿದ ಕೊಂಬೆ ರಸ್ತೆಯ ಮೇಲೆ ಬೀಳುವ ಅಪಾಯ ಇದೆ.
ಬಿಬಿಎಂಪಿ ಕೊಂಬೆ ತೆರವುಗೊಳಿಸುವ ಮೊದಲು ಅದರ ಕೆಳಭಾಗದಲ್ಲಿರುವ ವಿದ್ಯುತ್ ತಂತಿಯನ್ನು ಬೆಸ್ಕಾಂ ತೆರವುಗೊಳಿಸಬೇಕು. ಆದರೆ ಎರಡೂ ಇಲಾಖೆಗಳಿಗೆ ತಾಳಮೇಳ ಕೂಡಿ ಬಂದೇ ಇಲ್ಲ. ಸ್ಥಳೀಯರು ಹಲವಾರು ಬಾರಿ ಮನವಿ ಮಾಡಿಕೊಂಡರೂ ಫಲಿತಾಂಶ ಶೂನ್ಯ. ದೊಡ್ಡ ಅಪಾಯ ಎದುರಾಗುವ ಮೊದಲಾದರೂ ಇಲಾಖೆಗಳು ಒಟ್ಟಾಗಿ ಕೊಂಬೆ ತೆರವು ಕಾರ್ಯಾಚರಣೆ ನಡೆಸುತ್ತವೆಯೇ? ಎಂಬುದು ಸ್ಥಳೀಯರ ಪ್ರಶ್ನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.