ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಮುಂಗಾರನ್ನು ಎದುರಿಸಲು ತಯಾರಿ ಮಾಡಿಕೊಂಡಿದೆ.
ರಾಜಕಾಲುವೆಗಳ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ಗುತ್ತಿಗೆ ನೀಡಿದ್ದು, ಪ್ರವಾಹ ಉಂಟಾಗದಂತೆ ಎಚ್ಚರವಹಿಸಬೇಕು ಎನ್ನುವ ಷರತ್ತನ್ನು ವಿಧಿಸಿದೆ.
ಒಂದು ವೇಳೆ ಪ್ರವಾಹ ಉಂಟಾದರೆ, ಹೂಳು ತೆಗೆಯಲು ಗುತ್ತಿಗೆ ಪಡೆದಕಂಪನಿಯನ್ನು ಹೊಣೆ ಮಾಡಲಾಗುತ್ತದೆ. ವಲಯವೊಂದಕ್ಕೆ ಪ್ರತಿದಿನ ₹ 1 ಲಕ್ಷ ದಂಡ ವಿಧಿಸಲಾಗುತ್ತದೆ. ಕೋರಮಂಗಲ–ಚಲ್ಲಘಟ್ಟ ಕಾಲುವೆಯಲ್ಲಿ ಪ್ರವಾಹ ಉಂಟಾದರೆ ₹ 9 ಲಕ್ಷ ದಂಡ ವಿಧಿಸಲಿದೆ.
ಇದೇ ಮೊದಲ ಬಾರಿಗೆ ಇಂಥ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಕೆ ತಂದಿದೆ. 440 ಕಿ.ಮೀ ರಾಜಕಾಲುವೆಗಳ ವಾರ್ಷಿಕ ನಿರ್ವಹಣೆಯನ್ನು ಯೋಗ ಎನ್ನುವ ಕಂಪನಿಗೆ ₹36.65 ಲಕ್ಷಕ್ಕೆ ಗುತ್ತಿಗೆ ನೀಡಿದೆ. ಏಪ್ರಿಲ್ 9ರಂದು ಕಂಪನಿಗೆ ಕಾರ್ಯಾದೇಶವನ್ನು ಸಹ ನೀಡಲಾಗಿದೆ. ಪೂರ್ವ ತಯಾರಿ ಮಾಡಿಕೊಳ್ಳಲು ಕಂಪನಿಗೆ ಸಮಯ ನೀಡಲಾಗಿದೆ.
ನಗರದ 842 ಕಿ.ಮೀ ರಾಜಕಾಲುವೆ ಬಿಬಿಎಂಪಿ ವ್ಯಾಪ್ತಿಗೆ ಒಳಪಡುತ್ತದೆ. ಈಗಾಗಲೇ 349 ಕಿ.ಮೀ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಲಾಗಿದೆ. ಇದೇ31ರೊಳಗೆ ಇನ್ನೂ 184 ಕಿ.ಮೀ ಕಾಲುವೆಗೆ ತಡೆಗೋಡೆ ನಿರ್ಮಿಸುವ ಕಾರ್ಯ ಮುಗಿಯಲಿದೆ ಎಂದು ಪಾಲಿಕೆ ತಿಳಿಸಿದೆ.
‘ಪ್ರವಾಹ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಗುತ್ತಿಗೆ ಪಡೆದ ಕಂಪನಿಗೆ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರತಿದಿನಎಂಟುರೊಬೋಟಿಕ್ ಯಂತ್ರಗಳು, 15 ಟ್ರಕ್ಗಳು ಮತ್ತು 880 ಜನರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದುಪಾಲಿಕೆ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾರ್ವಜನಿಕರುರಾಜಕಾಲುವೆಗಳನ್ನು ಕಸದ ತೊಟ್ಟಿಗಳನ್ನಾಗಿ ಮಾಡಿಕೊಂಡಿದ್ದಾರೆ.ಕಸ ಹಾಗೂ ಪ್ಲಾಸ್ಟಿಕ್ ಅನ್ನು ಅಲ್ಲಿಯೇ ಸುರಿಯುತ್ತಾರೆ. ಇನ್ನುಮುಂದೆ ಅಂಥವರಿಗೆ ದಂಡ ವಿಧಿಸಲಾಗುವುದು’ ಎಂದು ಹೇಳಿದರು.
‘ರಾಜಕಾಲುವೆಯ ನಕ್ಷೆಯನ್ನು ತಯಾರಿಸಲಾಗಿದೆ. ಹಣಕಾಸಿನ ತೊಂದರೆಯಿಲ್ಲ. 14ನೇ ಹಣಕಾಸಿಗೆ ₹35 ಕೋಟಿ ಒದಗಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.