ADVERTISEMENT

ಲಸಿಕೆ ವಿತರಣೆ ಹೆಚ್ಚಿಸಲು ಕ್ರಮ

ಕೋವಿಡ್‌ ಪರಿಹಾರ ಕ್ರಮಗಳ ಸಿದ್ಧತೆ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 16:17 IST
Last Updated 10 ಏಪ್ರಿಲ್ 2021, 16:17 IST
ಆಡುಗೋಡಿಯ ಲಸಿಕೆ ವಿತರಣಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಗೌರವ್‌ ಗುಪ್ತ ಅವರು ಸಿಬ್ಬಂದಿ ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದರು
ಆಡುಗೋಡಿಯ ಲಸಿಕೆ ವಿತರಣಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಗೌರವ್‌ ಗುಪ್ತ ಅವರು ಸಿಬ್ಬಂದಿ ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದರು   

ಬೆಂಗಳೂರು: ‘ನಗರದಲ್ಲಿ ಕೋವಿಡ್‌ ಲಸಿಕೆ ವಿತರಿಸಲು ಸುಮಾರು 500 ಸ್ಥಳಗಳಿವೆ. ಈ ಪ್ರತಿ ಸ್ಥಳದಲ್ಲಿ ಕನಿಷ್ಠ 100ರಿಂದ 150 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಗೌರವ್ ಗುಪ್ತ ಹೇಳಿದರು.

ನಗರದ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿನ ಸಿದ್ಧತೆ, ಲಸಿಕೆ ವಿತರಣೆ ಕೇಂದ್ರ ಹಾಗೂ ಕೋವಿಡ್‌ ಪರೀಕ್ಷಾ ಕೇಂದ್ರಗಳ ಕಾರ್ಯಗಳನ್ನು ಅವರುಶನಿವಾರ ಪರಿಶೀಲಿಸಿದರು.

‘ಈಗಿರುವ ಲಸಿಕೆ ಕೇಂದ್ರಗಳ ಜೊತೆಗೆ ಅಗತ್ಯವಿರುವ ಕಡೆ ಹೆಚ್ಚುವರಿಯಾಗಿ ಹೊಸ ಕೇಂದ್ರ ತೆರೆಯಲಾಗುವುದು. ಲಸಿಕೆ ಪಡೆಯುವವರಿಗೆ ಅವಶ್ಯಕವಿರುವ ಕಡೆ ವಾಹನಗಳ ವ್ಯವಸ್ಥೆಯನ್ನು ಆಯಾ ವಲಯ ಆಯುಕ್ತರ ಮಟ್ಟದಲ್ಲಿ ಒದಗಿಸಲಾಗುವುದು’ ಎಂದರು.

ADVERTISEMENT

ಔಷಧಾಲಯಕ್ಕೆ ಭೇಟಿ:

ನಗರದ ಆಡುಗೋಡಿ ಔಷಧಾಲಯವನ್ನು ಮುಖ್ಯ ಆಯುಕ್ತರು ಪರಿಶೀಲಿಸಿದರು. ಈ ವೇಳೆ ಲಸಿಕೆ ಪಡೆಯಲು ಬಂದವರನ್ನು ಮಾತನಾಡಿಸಿ ಲಸಿಕೆ ನೀಡುವ ವ್ಯವಸ್ಥೆ ಬಗ್ಗೆ ಹಾಗೂ ಪಡೆದ ನಂತರದ ಅನುಭವಗಳ ಬಗ್ಗೆ ಮಾಹಿತಿ ಪಡೆದರು.

ಆರೈಕೆ ಕೇಂದ್ರಗಳ ಸ್ಥಾಪನೆ ಶೀಘ್ರ:

‘ಬಾಷ್ ಸಂಸ್ಥೆಯು ಸಹಭಾಗಿತ್ವದಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದನ್ನು ಪಾಲಿಕೆ ತೆಕ್ಕೆಗೆ ಪಡೆಯಲಿದ್ದೇವೆ. ಈ ಸಂಬಂಧ ಬಾಷ್ ಸಂಸ್ಥೆ ಹಾಗೂ ಪಾಲಿಕೆ ಜೊತೆ ಚರ್ಚೆ ನಡೆಯುತ್ತಿದೆ. ಕೋವಿಡ್ ಆರೈಕೆ ಕೇಂದ್ರ ಪ್ರಾರಂಭಿಸಲು ಇನ್ನೆರಡು ದಿಮಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯ ಆಯುಕ್ತರು ತಿಳಿಸಿದರು.

‘ಪಾಲಿಕೆಯ ಎಲ್ಲ ವಲಯಗಳಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಎರಡು ಅಥವಾ ಮೂರು ಕೋವಿಡ್ ಆರೈಕೆ ಕೇಂದ್ರಗಳನ್ನು ಶೀಘ್ರವಾಗಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಮನೆಯಲ್ಲಿ ಪ್ರತ್ಯೇಕವಾಗಿರಲು ಸಾಧ್ಯವಾಗದಂತಹ ಸೋಂಕಿತ ವ್ಯಕ್ತಿಗಳನ್ನು ಆರೈಕೆ ಕೇಂದ್ರಗಳಲ್ಲಿರಿಸಿ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.