ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ ಲಾರ್ವಾ ತಡೆಗೆ ಸ್ವಯಂಸೇವಕರು

ವರುಣ ಹೆಗಡೆ
Published 30 ಜುಲೈ 2025, 0:11 IST
Last Updated 30 ಜುಲೈ 2025, 0:11 IST
ಡೆಂಗಿ ಹರಡುವ ಈಡಿಸ್ ಸೊಳ್ಳೆ
ಡೆಂಗಿ ಹರಡುವ ಈಡಿಸ್ ಸೊಳ್ಳೆ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಈಡಿಸ್ ಲಾರ್ವಾ ನಿರ್ಮೂಲನೆಗೆ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲಾಗಿದೆ. ಇದರಿಂದಾಗಿ ಕಳೆದ ವರ್ಷ ನಗರದ ಜನರನ್ನು ಕಾಡಿದ್ದ ಡೆಂಗಿ ಸಮಸ್ಯೆ ಈ ವರ್ಷದ ಮೊದಲಾರ್ಧದಲ್ಲಿ ನಿಯಂತ್ರಣದಲ್ಲಿದೆ.

ಕಳೆದ ವರ್ಷ ಮುಂಗಾರು ಅವಧಿಯಲ್ಲಿ ಬಿಸಿಲು–ಮಳೆಯ ವಾತಾವರಣದಿಂದಾಗಿ ರಾಜ್ಯದಲ್ಲಿ 32 ಸಾವಿರಕ್ಕೂ ಅಧಿಕ ಡೆಂಗಿ ಪ್ರಕರಣಗಳು ವರದಿಯಾಗಿದ್ದವು. ಈ ಪ್ರಕರಣಗಳಲ್ಲಿ ಅರ್ಧದಷ್ಟು ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ವರದಿಯಾಗಿತ್ತು. ಇದರಿಂದಾಗಿ ಆಸ್ಪತ್ರೆಗಳಲ್ಲಿಯೂ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಒಂದು ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಡೆಂಗಿ ಶಂಕೆ ವ್ಯಕ್ತವಾಗಿ, 70 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿತ್ತು. ಈ ವರ್ಷ ಆರಂಭದಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರಿಂದ, ಉತ್ತಮ ಮಳೆಯಿಂದಾಗಿ ಕಳೆದ ವರ್ಷ ಈ ವೇಳೆಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಅರ್ಧಕ್ಕಿಂತ ಕಡಿಮೆ ವರದಿಯಾಗಿದೆ.

ADVERTISEMENT

ಹಗಲಿನಲ್ಲಿ ಕಚ್ಚುವ ಈಡೀಸ್‌ ಈಜಿಪ್ಟಿ ಸೊಳ್ಳೆಗಳಿಂದ ಡೆಂಗಿ ಜ್ವರ ಹರಡುತ್ತದೆ. ಕಳೆದ ವರ್ಷ ಈ ವೇಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ 7 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಈವರೆಗೆ 7 ಸಾವಿರಕ್ಕೂ ಅಧಿಕ ಡೆಂಗಿ ಶಂಕಿತರಲ್ಲಿ, 5 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. 1,772 ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಕರಣಗಳ ಸಂಖ್ಯೆ ಶೇ 75ರಷ್ಟು ಇಳಿಕೆಯಾಗಿದೆ.

ಮೂಲದಲ್ಲೇ ಪತ್ತೆ: ಕಳೆದ ವರ್ಷ ಡೆಂಗಿ ಪ್ರಕರಣಗಳು ದಿಢೀರ್ ಏರಿಕೆಯಾದ ಪರಿಣಾಮ, ಇಲ್ಲಿನ ಕೆ.ಸಿ.ಜನರಲ್, ಸರ್.ಸಿ.ವಿ. ರಾಮನ್ ಸೇರಿ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗಿ ಪೀಡಿತರ ಚಿಕಿತ್ಸೆಗೆ ತಲಾ 25 ಹಾಸಿಗೆಗಳನ್ನು ಮೀಸಲಿಡಲಾಗಿತ್ತು. ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ಮೂಲದಲ್ಲಿಯೇ ನಿರ್ಮೂಲನೆ ಮಾಡಲು ಈ ವರ್ಷ ಕ್ರಮಕೈಗೊಳ್ಳಲಾಗಿದ್ದು, ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ 700 ಸ್ವಯಂ ಸೇವಕರು ಹಾಗೂ 240 ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನು ನೇಮಿಸಲಾಗಿದೆ.

‘ಡೆಂಗಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ಶುಕ್ರವಾರ ಡೆಂಗಿ ತಡೆಗಟ್ಟುವ ದಿನವನ್ನಾಗಿ ಆಚರಿಸಲಾಗುತ್ತಿದೆ. ನಿವೇಶನ, ಕಟ್ಟಡ, ನೀರಿನ ಟ್ಯಾಂಕ್‌, ಉದ್ಯಾನ, ಆಟದ ಮೈದಾನ ಸೇರಿ ವಿವಿಧೆಡೆ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗೆ ಜನರೂ ಕ್ರಮ ಕೈಗೊಳ್ಳಬೇಕು. ನೀರಿನ ಸಂಗ್ರಹದ ಪಾತ್ರೆಗಳು, ಸಂಪ್‌ ಮತ್ತು ಓವರ್‌ಹೆಡ್ ಟ್ಯಾಂಕ್‌ಗಳನ್ನು ಸುರಕ್ಷಿತವಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮಳೆಗಾಲಮುಗಿಯುವ ತನಕ ಈ ಕ್ರಮ ಅನುಸರಿಸಬೇಕು’ ಎಂದು ಆರೋಗ್ಯಾಧಿಕಾರಿ ಯೊಬ್ಬರು ತಿಳಿಸಿದರು.

ಸ್ವಚ್ಛತೆ ಕಾಯ್ದುಕೊಳ್ಳದಿದ್ದರೆ ದಂಡ

ಡೆಂಗಿ ಜ್ವರವನ್ನು ರಾಜ್ಯ ಸರ್ಕಾರ ಕಳೆದ ವರ್ಷ ಸಾಂಕ್ರಾಮಿಕ ಕಾಯಿಲೆ ಎಂದು ಘೋಷಿಸಿದೆ. ಸಾಂಕ್ರಾಮಿಕ ರೋಗಗಳ ಕಾಯ್ದೆ–2020ರ ಅಡಿಯಲ್ಲಿನ ನಿಯಮಗಳನ್ನು ತಿದ್ದುಪಡಿ ಮಾಡಿ, ‘ಕರ್ನಾಟಕ ಸಾಂಕ್ರಾಮಿಕ ರೋಗಗಳು (ತಿದ್ದುಪಡಿ ನಿಯಮಗಳು) 2024’ ಎಂಬ ಶೀರ್ಷಿಕೆಯಡಿ ಅಧಿಸೂಚನೆ ಹೊರಡಿಸಲಾಗಿದೆ. ಜಮೀನು, ನಿವೇಶನ, ಕಟ್ಟಡ, ನೀರಿನ ಟ್ಯಾಂಕ್‌, ಉದ್ಯಾನ, ಆಟದ ಮೈದಾನ ಸೇರಿ ಯಾವುದೇ ಸ್ಥಳದಲ್ಲಿ ಮಾಲೀಕರು ಅಥವಾ ಸಂಬಂಧಪಟ್ಟ ವ್ಯಕ್ತಿಗಳು ಡೆಂಗಿ ಹರಡುವ ಸೊಳ್ಳೆಗಳ ಲಾರ್ವಾ ಉತ್ಪತ್ತಿಯಾಗಲು ಅವಕಾಶ ಮಾಡಿಕೊಟ್ಟರೆ ₹ 400ರಿಂದ ₹ 2 ಸಾವಿರದವರೆಗೂ ದಂಡ ವಿಧಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.