ಬೆಂಗಳೂರು: ಕಸ ವಿಲೇವಾರಿ ಟೆಂಡರ್ ಅಂತಿಮಗೊಳಿಸುವ ವಿಚಾರದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲು ಬಿಬಿಎಂಪಿಗೆ ಇನ್ನೂ ಸಾಧ್ಯವಾಗಿಲ್ಲ. ಇಂದೋರ್ ಮಾದರಿಯಲ್ಲಿ ಕಸ ವಿಲೇ ಮಾಡುವ ಮಂತ್ರವನ್ನು ಒಂದು ವರ್ಷದಿಂದ ಜಪಿಸುತ್ತಿರುವ ಪಾಲಿಕೆಯ ಈಗಿನ ಆಡಳಿತ ಅದರ ಪರಿಣಾಮಕಾರಿ ಅನುಷ್ಠಾನಕ್ಕೂ ಕ್ರಮಕೈಗೊಂಡಿಲ್ಲ.
ಕೇಂದ್ರ ಸರ್ಕಾರದ ಹೊಸ ನಿಯಮಗಳ ಪ್ರಕಾರ ಮಿಶ್ರಕಸವನ್ನು ಭೂಭರ್ತಿ ಕೇಂದ್ರದಲ್ಲಿ ಸುರಿಯುವಂತಿಲ್ಲ. ಹಾಗಾಗಿ ಗಂಗಾಂಬಿಕೆಮೇಯರ್ ಆಗಿದ್ದ ಅವಧಿಯಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಬಗ್ಗೆ ಟೆಂಡರ್ ಆಹ್ವಾನಿಸಲಾಗಿತ್ತು. 2019ರ ಮೇನಲ್ಲಿ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 168 ವಾರ್ಡ್ಗಳ ಕಸ ವಿಲೇವಾರಿಗೆ558 ಗುತ್ತಿಗೆದಾರರು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ತಡೆಯಾಜ್ಞೆ ಇದ್ದುದರಿಂದ ಎಂಎಸ್ಜಿಪಿಗೆ ಸಂಬಂಧಿಸಿದ 30 ವಾರ್ಡ್ಗಳ ಟೆಂಡರ್ ಬಿಡ್ ತೆರೆದಿರಲಿಲ್ಲ.
ವಾರ್ಷಿಕ ಟೆಂಡರ್ ಮೊತ್ತ ₹1 ಕೋಟಿಗಿಂತ ಕಡಿಮೆಯಿದ್ದರೆ ಅದಕ್ಕೆ ಆಯುಕ್ತರ ಒಪ್ಪಿಗೆ ಸಾಕಾಗುತ್ತದೆ. ಟೆಂಡರ್ ಮೊತ್ತ ₹ 1 ಕೋಟಿಯಿಂದ ₹ 3 ಕೋಟಿ ನಡುವೆಯಿದ್ದರೆ ಆರೋಗ್ಯ ಸ್ಥಾಯಿಸಮಿತಿಯ ಹಾಗೂ ₹ 3 ಕೋಟಿಗಿಂತ ಹೆಚ್ಚು ಇದ್ದರೆ ಕೌನ್ಸಿಲ್ ಸಭೆಯ ಅನುಮೋದನೆ ಅಗತ್ಯ. 45 ವಾರ್ಡ್ಗಳ ಟೆಂಡರ್ ಸಂಬಂಧ ಆಯಕ್ತರ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳಬಹುದಾಗಿದೆ. 105 ವಾರ್ಡ್ಗಳ ಗುತ್ತಿಗೆ ಸಂಬಂಧ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್ ಸಭೆಯ ಅನುಮೋದನೆ ಅಗತ್ಯವಿದೆ.
ಪಾಲಿಕೆಯ ಈಗಿನ ಆಡಳಿತ ಹಸಿ ಕಸ ಮತ್ತು ಒಣ ಕಸ ಸಂಗ್ರಹದ ಗುತ್ತಿಗೆಯನ್ನು ಒಬ್ಬರಿಗೆ ನೀಡುವ ಬಗ್ಗೆ ಆಸಕ್ತಿ ಹೊಂದಿದೆ. ಹಾಗಾಗಿ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡರೂ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವುದನ್ನು ಮುಂದೂಡುತ್ತಾ ಬಂದಿದೆ. ಇದನ್ನು ಪ್ರಶ್ನಿಸಿ ಗುತ್ತಿಗೆದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಕಸದ ಟೆಂಡರ್ ವಿಚಾರ ಪಾಲಿಕೆ ಕೌನ್ಸಿಲ್ ಸಭೆಯಲ್ಲೂ ಮಂಗಳವಾರ ಚರ್ಚೆಗೊಳಾಗಿದೆ.
‘ಕೇವಲ ಶೇ 25ರಷ್ಟು ಕಸವನ್ನು ಮಾತ್ರ ವಿಂಗಡಣೆ ಯಾಗುತ್ತಿದೆ. ನಿತ್ಯ ಸರಾಸರಿ 3 ಸಾವಿರ ಟನ್ಗಳಷ್ಟು ಮಿಶ್ರ ಕಸ ಭೂಭರ್ತಿ ಕೇಂದ್ರಗಳಿಗೆ ಹೋಗುತ್ತಿದೆ. ಹಾಗಾಗಿ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ಯಶಸ್ವಿಯಾಗದು’ ಎನ್ನುತ್ತಾರೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು.
ಇದನ್ನು ವಿರೋಧ ಪಕ್ಷದವರು ಒಪ್ಪಲು ಸಿದ್ಧವಿಲ್ಲ. ‘ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಆಡಳಿತವಿದ್ದಾಗ ಕಸ ವಿಂಗಡಣೆ ಪ್ರಮಾಣ ಶೇ 65ರವರೆಗೆ ಹೋಗಿತ್ತು. ಟೆಂಡರ್ ಜಾರಿಯಾದರೆ ಕಸ ವಿಲೇವಾರಿ ಹದ್ದುಬಸ್ತಿಗೆ ಬರಲಿದೆ’ ಎಂಬುದು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ವಾದ.
ಕೌನ್ಸಿಲ್ ಸಭೆ ಬಳಿಕ ಮೇಯರ್ ಈ ವಿಚಾರವಾಗಿ ತುರ್ತು ಸಭೆ ನಡೆಸಿದ್ದಾರೆ. ಅಚ್ಚರಿಯೆಂದರೆ ಆ ಸಭೆಯಲ್ಲಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರೇ ಭಾಗವಹಿಸಿಲ್ಲ.
‘ಕಸದ ಟೆಂಡರ್ ಜಾರಿ ಕುರಿತು ಹೈಕೋರ್ಟ್ ಆದೇಶ ಏನಿದೆ ಎಂಬ ಬಗ್ಗೆ ಚರ್ಚಿಸಿದ್ದೇವೆ. ಈ ವಿಚಾರದಲ್ಲಿ ಒಂದೆರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ಮೇಯರ್ ಎಂ.ಗೌತಮ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.