ADVERTISEMENT

ಐಎಎಸ್‌ ಅಧಿಕಾರಿಯನ್ನು ವಾಪಸ್‌ ಕಳುಹಿಸುವಂತೆ ಒತ್ತಾಯ

ಕೋವಿಡ್‌: ನೋಡಲ್‌ ಅಧಿಕಾರಿಯಿಂದ ಬಿಬಿಎಂಪಿ ಸಿಬ್ಬಂದಿಯ ನಿಂದನೆ ಆರೋಪ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 16:23 IST
Last Updated 13 ಸೆಪ್ಟೆಂಬರ್ 2020, 16:23 IST

ಬೆಂಗಳೂರು: ಮಹದೇವಪುರ ವಲಯದ ಕೋವಿಡ್‌ ನಿಯಂತ್ರಣ ಕಾರ್ಯದ ನೋಡಲ್‌ ಅಧಿಕಾರಿಯಾಗಿರುವ ಐಎಎಸ್‌ ಅಧಿಕಾರಿ ಮಂಜುಳಾ ಅವರು ಬಿಬಿಎಂಪಿ ಸಿಬ್ಬಂದಿಯನ್ನು ನಿಂದಿಸಿ, ಕೀಳಾಗಿ ನಡೆಸಿಕೊಂಡಿದ್ದಾರೆ. ಅವರನ್ನು ವಾಪಸ್‌ ಕಳುಹಿಸಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.

‘ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಅಯೋಗ್ಯರು, ಕೆಲಸ ಕಳ್ಳರು. ಅದಕ್ಕಾಗಿಯೇ ನನಗೆ ಈ ಹೊಣೆ ವಹಿಸಿರುವುದು. ನಿಮ್ಮನ್ನು ಅಮಾನತು ಮಾಡಿಸುತ್ತೇನೆ’ ಎನ್ನುವ ಮೂಲಕ ಮಂಜುಳಾ ಅವರು ಸಿಬ್ಬಂದಿಯ ತೇಜೋವಧೆ ಮಾಡಿದ್ದಾರೆ. ಇದರಿಂದ ಬಿಬಿಎಂಪಿ ಸಿಬ್ಬಂದಿಯ ಆತ್ಮಸ್ಥೈರ್ಯ ಕುಗ್ಗಿದೆ. ಅವರು ನೌಕರರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಸಂಘದ ಅಧ್ಯಕ್ಷ ಎ.ಅಮೃತರಾಜ್‌ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್‌.ನಂಜಪ್ಪ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಪತ್ರ ಬರೆದಿದ್ದಾರೆ.

‘ಈ ಅಧಿಕಾರಿಯ ಬೆದರಿಕೆಯಿಂದ ನೊಂದು ಪಾಲಿಕೆ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಮಂಜುಳಾ ಅವರನ್ನು ಬಿಬಿಎಂಪಿ ಸೇವೆಯಿಂದ ವಾಪಸ್‌ ಕಳುಹಿಸದಿದ್ದರೆ ಸಾಮೂಹಿಕ ರಜೆ ಹಾಕಿ ಕೋವಿಡ್‌ ನಿಯಂತ್ರಣ ಕಾರ್ಯವನ್ನು ಸ್ಥಗಿತಗೊಳಿಸುತ್ತೇವೆ’ ಎಂದು ಅಮೃತ್‌ರಾಜ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.