ಬೆಂಗಳೂರು: ಬಿಬಿಎಂಪಿ ಸಿಬ್ಬಂದಿಗೆ ಸೋಂಕು ತಗುಲಿದರೆ, ಅವರ ಚಿಕಿತ್ಸೆಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಸೋಂಕು ದೃಢಪಟ್ಟ ಅಧಿಕಾರಿಗಳ ಮತ್ತು ನೌಕರರ ಜೊತೆ ನೇರ ಸಂಪರ್ಕ ಹೊಂದಿರುವ ಸಂಬಂಧಿಕರನ್ನು ಕ್ವಾರಂಟೈನ್ ಮಾಡಲು ಪಂಚತಾರಾ ಹೋಟೆಲ್ ಮೀಸಲಿಡಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿರುವ ಸಂಘವು, ‘ನಮ್ಮ ಬೇಡಿಕೆ ಈಡೇರಿಸದಿದ್ದರೆ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಮೂಹಿಕ ರಜೆ ಹಾಕಲಿದ್ದಾರೆ. ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಿದ್ದಾರೆ’ ಎಂದು ಎಚ್ಚರಿಕೆ ನೀಡಿದೆ.
‘ಕೋವಿಡ್ ಸೋಂಕು ದೃಢಪಟ್ಟ ಪೊಲೀಸ್ ಸಿಬ್ಬಂದಿಯ ಚಿಕಿತ್ಸೆಗಾಗಿ ಸರ್ಕಾರ ಪ್ರತ್ಯೇಕ ಆಸ್ಪತ್ರೆಯನ್ನು ವ್ಯವಸ್ಥೆ ಮಾಡಿದೆ. ನಮ್ಮ ಅನೇಕ ಸಿಬ್ಬಂದಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದೇ ಸಮಸ್ಯೆ ಎದುರಿಸಿದ್ದಾರೆ. ಹಾಗಾಗಿ ಸೋಂಕು ತಗಲುವ ಅಪಾಯವನ್ನು ಹೆಚ್ಚು ಎದುರಿಸುತ್ತಿರುವ ಪಾಲಿಕೆ ಸಿಬ್ಬಂದಿ ಚಿಕಿತ್ಸೆಗೂ ಸೌಕರ್ಯ ಕಲ್ಪಿಸಲಿ’ ಎಂದು ಸಂಘದ ಅಧ್ಯಕ್ಷ ಎ.ಅಮೃತರಾಜ್ ಒತ್ತಾಯಿಸಿದ್ದಾರೆ.
‘ಪಾಲಿಕೆಯಲ್ಲಿ ಇದುವರೆಗೆ 150ಕ್ಕೂ ಅಧಿಕ ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ.’ ಎಂದು ಅವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
**
ಬಿಬಿಎಂಪಿಯ 150ಕ್ಕೂ ಅಧಿಕ ಸಿಬ್ಬಂದಿ ಕೋವಿಡ್ಗೆ ಒಳಗಾಗಿದ್ದರೂ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಮುಖ್ಯಮಂತ್ರಿಯವರೇ ಬೆಂಗಳೂರು ಉಸ್ತುವಾರಿ ಸಚಿವರು. ನಾಲ್ಕೈದು ಬಾರಿ ಮನವಿ ಸಲ್ಲಿಸಿದರೂ ಪಾಲಿಕೆ ಸಿಬ್ಬಂದಿಯ ಸಂಕಷ್ಟದ ಬಗ್ಗೆ ಅವರು ಸ್ಪಂದಿಸಿಲ್ಲ.
-ಎ.ಅಮೃತರಾಜ್, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.