ಬಿಬಿಎಂಪಿ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ಸ್ವತ್ತುಗಳಿಗೆ ಯಾವುದೇ ರೀತಿಯ ಖಾತಾ ನೀಡದಂತೆ ಸುತ್ತೋಲೆ ಹೊರಡಿಸಲಾಗಿದೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಕೆಟಿಸಿಪಿ) ಕಾಯ್ದೆ 1961ರ ಪ್ರಕರಣ 17ಕ್ಕೆ ತಿದ್ದುಪಡಿಯಾಗಿದ್ದು, ಅದರಂತೆ ಏಕ ನಿವೇಶನವೂ ಸೇರಿದಂತೆ ಎಲ್ಲ ಸ್ವತ್ತುಗಳಿಗೂ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಇಂತಹ ಅನುಮೋದನೆ ಪಡೆಯದ ಸ್ವತ್ತುಗಳಿಗೆ ಬಿಬಿಎಂಪಿ, ಯಾವುದೇ ಎ–ಖಾತಾ ದಾಖಲಿಸಲು, ನೋಂದಾಯಿಸಲು ಅವಕಾಶವಿರುವುದಿಲ್ಲ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುತ್ತೋಲೆ ಹೊರಡಿಸಿದ್ದಾರೆ.
ಕರ್ನಾಟಕ ಭೂ ಕಂದಾಯ ಕಾಯ್ದೆ 1964 (ಕೆಎಲ್ಆರ್) ಪ್ರಕರಣ 95ರಡಿ ವ್ಯವಸಾಯದ ಜಮೀನನ್ನು ವ್ಯವಸಾಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ‘ಏಕ ನಿವೇಶನ’ಕ್ಕೆ ಅನುಮೋದನೆ ನೀಡಿ, ಖಾತಾ ನೀಡಲಾಗುತ್ತಿತ್ತು. ಇದೀಗ ಕೆಟಿಸಿಪಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ, ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಅನುಮೋದನೆಯಾಗದ ಸ್ವತ್ತುಗಳಿಗೆ ಬಿಬಿಎಂಪಿ ಖಾತೆ ನೀಡುವುದಿಲ್ಲ. ಅಲ್ಲದೆ, ಈಗಾಗಲೇ ಖಾತಾ ಪಡೆದಿದ್ದರೂ ಖಾತಾ ವಿಭಜನೆ ಅಥವಾ ಉಪ ವಿಭಾಗಗಳನ್ನು ಮಾಡಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಕಚೇರಿಗಳಲ್ಲಿ ಖಾತಾ ನೀಡಲು ಬಾಕಿ ಉಳಿಸಿಕೊಂಡಿರುವ ಅರ್ಜಿಗಳನ್ನು ವಿಲೇವಾರಿ ಮಾಡುವಂತಿಲ್ಲ. ಎಲ್ಲ ಅರ್ಜಿಗಳು ತಕ್ಷಣದಿಂದಲೇ ರದ್ದಾಗುತ್ತವೆ. ಉಲ್ಲಂಘನೆ ಮಾಡಿದ ಅಧಿಕಾರಿಗಳು, ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತುಷಾರ್ ಗಿರಿನಾಥ್ ಅವರು ಜನವರಿ 7ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಿದ್ದಾರೆ.
l ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಆಗದಿರುವ,
ಎ ಅಥವಾ ಬಿ ಖಾತಾವನ್ನು ಹೊಂದಿರುವ ನಿವೇಶನಗಳಿಗೆ ವಿಭಜನೆ ಅಥವಾ ಉಪ ವಿಭಾಗವನ್ನು ಬಿಬಿಎಂಪಿ ಮಾಡುವುದಿಲ್ಲ.
l ಸಕ್ಷಮ ಯೋಜನಾ ಪ್ರಾಧಿಕಾರದ ಅನುಮೋದನೆಯೊಂದಿಗೆ ಸ್ವಾಧೀನಾನುಭವ ಪತ್ರ (ಒ.ಸಿ) ಪಡೆಯಲಾದ ಏಕ– ಘಟಕ ಅಥವಾ ಬಹು–ಘಟಕಗಳ ಕಟ್ಟಡದಲ್ಲಿನ ಪ್ರತಿ ಘಟಕವನ್ನು ಎ ವಹಿಯಲ್ಲಿ ದಾಖಲಿಸಿಕೊಂಡು ಎ–ಖಾತಾ ನೀಡಲಾಗುತ್ತದೆ.
l ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ, ಎ ಅಥವಾ ಬಿ ಖಾತಾ ಹೊಂದಿರುವ ಸ್ವತ್ತುಗಳಲ್ಲಿ ನಿರ್ಮಿಸಿರುವ ಏಕ ಅಥವಾ ಬಹು– ಘಟಕಗಳು, 2024ರ ಸೆಪ್ಟೆಂಬರ್ 30ರೊಳಗೆ ಬೆಸ್ಕಾಂ ಅಥವಾ ಜಲಮಂಡಳಿಯಿಂದ ಸಂಪರ್ಕ ಪಡೆದಿದ್ದರೆ ಅವುಗಳಿಗೆ ಬಿ ಖಾತಾ ನೀಡಲಾಗುತ್ತದೆ.
l ಕೃಷಿ ಜಮೀನನ್ನು ಕೃಷಿಯಿಂದ ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಲಾಗಿದ್ದರೆ
ಆ ಖಾಲಿ ಜಮೀನಿಗೆ ಬಿಬಿಎಂಪಿ ‘ಎ’ ಅಥವಾ ‘ಬಿ’ ವಹಿ/ ಖಾತಾವನ್ನು ಹೊಸದಾಗಿ ದಾಖಲಿಸುವುದಿಲ್ಲ.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಏಳು ಲಕ್ಷ ಆಸ್ತಿಗಳಿಂದ ತೆರಿಗೆ ಪಾವತಿಯಾಗುತ್ತಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
‘ಬೆಸ್ಕಾಂ, ಜಲಮಂಡಳಿ ಸಂಪರ್ಕದ ಮಾಹಿತಿಯು ನಮ್ಮ ತೆರಿಗೆ ಪಾವತಿ ದತ್ತಾಂಶಗಳ ಜೊತೆಯಲ್ಲಿ ತಾಳೆಯಾಗು
ತ್ತಿಲ್ಲ. ಅಲ್ಲದೆ, ಖಾತಾ ಹೊಂದಿರುವ ಎರಡು ಲಕ್ಷ ಆಸ್ತಿಗಳ ಮಾಲೀಕರು ತೆರಿಗೆ ಪಾವತಿಸುತ್ತಿಲ್ಲ. ಇವೆಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಹೆಚ್ಚು ಆಸ್ತಿ ತೆರಿಗೆ ಪಾವತಿ ಮಾಡದ ವಾಣಿಜ್ಯ ಕಟ್ಟಡಗಳಿಗೆ ಮಾತ್ರ ಬೀಗಮುದ್ರೆ ಹಾಕಲಾಗುತ್ತಿದೆ. ಅವರಿಗೆ ಸಮಯ ನೀಡಿ, ಕಾನೂನು ಪ್ರಕಾರವೇ ಹರಾಜಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.