ADVERTISEMENT

75 ಎಕರೆ ಕೆರೆ ಜಾಗ ಒತ್ತುವರಿ: ತೆರವಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 13:23 IST
Last Updated 29 ಫೆಬ್ರುವರಿ 2020, 13:23 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿ ಯಲಹಂಕ ವಲಯ ವ್ಯಾಪ್ತಿಯಲ್ಲಿ 75 ಎಕರೆ ಕೆರೆ ಜಾಗ ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಮೇಯರ್ ಎಂ.ಗೌತಮ್‌ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವಲಯ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಅವರು ಶುಕ್ರವಾರ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ‘ವಲಯದಲ್ಲಿ ಒಟ್ಟು 90 ಉದ್ಯಾನಗಳಿದ್ದು, 12 ಕೆರೆಗಳ ಬಳಿ ಉದ್ಯಾನ
ಅಭಿವೃದ್ಧಿಪಡಿಸ‌ಲಾಗಿದೆ. ಒಟ್ಟು 27 ಕೆರೆಗಳಿದ್ದು, ಅವುಗಳಲ್ಲಿ 75 ಎಕರೆಯಷ್ಟು ಒತ್ತುವರಿಯಾಗಿರುವ ಅಂದಾಜಿದೆ’ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ‘ಕೆರೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯಬೇಕು’ ಎಂದು ತಿಳಿಸಿದರು.

‘ಈ ವಲಯದಲ್ಲಿ ಒಟ್ಟು 1.93 ಲಕ್ಷ ಆಸ್ತಿಗಳಿದ್ದು, ₹252.35 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇದೆ. ಈವರೆಗೆ ₹223 ಕೋಟಿ (ಶೇ 88ರಷ್ಟು) ತೆರಿಗೆ ಸಂಗ್ರಹಿಸಲಾಗಿದೆ’ ಎಂದು ಕಂದಾಯ ಅಧಿಕಾರಿ ಮಾಹಿತಿ ನೀಡಿದರು.

ADVERTISEMENT

ಆಡಳಿತ ಪಕ್ಷದ ನಾಯಕ ಮುನಿಂದ್ರಕುಮಾರ್ ಮಾತನಾಡಿ, ‘ಯಲಹಂಕ ವ್ಯಾಪ್ತಿಯಲ್ಲಿ ಸುಮಾರು 130 ಪೇಯಿಂಗ್ ಗೆಸ್ಟ್‌(ಪಿ.ಜಿ)ಗಳಿವೆ. ವಸತಿ ಪ್ರದೇಶ ಹಾಗೂ 20 ಅಡಿ ರಸ್ತೆಯಲ್ಲಿ ಹಲವು ಪಿ.ಜಿ.ಗಳಿದ್ದು, ಅವುಗಳ ಪರವಾನಗಿ ರದ್ದುಗೊಳಿಸಿ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.