ADVERTISEMENT

ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಅಧಿಕಾರಿಗಳ ತಂಡ ಧಿಡೀರ್ ಭೇಟಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 20:25 IST
Last Updated 20 ಏಪ್ರಿಲ್ 2021, 20:25 IST
ಖಾಸಗಿ ಆಸ್ಪತ್ರೆಯೊಂದರಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ವಲಯ ಆಯುಕ್ತ ರಾಜೇಂದ್ರ ಚೋಳನ್, ಐಎಎಸ್ ಅಧಿಕಾರಿ ಯಶವಂತ್, ಜಂಟಿ ಆಯುಕ್ತ ಎಂ.ರಾಮಕೃಷ್ಣ ಇದ್ದಾರೆ.
ಖಾಸಗಿ ಆಸ್ಪತ್ರೆಯೊಂದರಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ವಲಯ ಆಯುಕ್ತ ರಾಜೇಂದ್ರ ಚೋಳನ್, ಐಎಎಸ್ ಅಧಿಕಾರಿ ಯಶವಂತ್, ಜಂಟಿ ಆಯುಕ್ತ ಎಂ.ರಾಮಕೃಷ್ಣ ಇದ್ದಾರೆ.   

ಬೊಮ್ಮನಹಳ್ಳಿ: ಕೊರೊನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆ ಗಳಲ್ಲಿ ಹಾಸಿಗೆ ಸಿಗುತ್ತಿಲ್ಲ ಎಂಬ ದೂರಿನ ಕಾರಣ ಬಿಬಿಎಂಪಿ ಅಧಿಕಾರಿಗಳ ತಂಡವು ಖಾಸಗಿ ಆಸ್ಪತ್ರೆಗಳಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್, ಅಪೋಲೋ, ಚಂದಾಪುರದ ಬಳಿ ನಾರಾಯಣ ಹೃದಯಾಲಯ ಹಾಗೂ ಆಕ್ಸ್ ಫರ್ಡ್ ಆಸ್ಪತ್ರೆಗಳಲ್ಲಿ ಶೇಕಡ 50ರಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆಯೇ? ಎಂಬುದನ್ನು ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿದರು. ಆದರೆ, ಯಾವ ಆಸ್ಪತ್ರೆಯಲ್ಲೂ ಸರ್ಕಾರ ನಿಗದಿಪಡಿಸಿದ ಹಾಸಿಗೆಗಳನ್ನು ಮೀಸಲಿಡದಿರುವುದು ಕಂಡು ಬಂತು.

ಈ ಕುರಿತು ಪ್ರತಿಕ್ರಿಯಿಸಿದ ವಲಯ ಆಯುಕ್ತ ರಾಜೇಂದ್ರ ಚೋಳನ್, ‘ಖಾಸಗಿ ಆಸ್ಪತ್ರೆಯವರು ಸದ್ಯ ಶೇಕಡ 20 ರಿಂದ 30 ರಷ್ಟು ಹಾಸಿಗೆಗಳನ್ನು ನೀಡಿದ್ದಾರೆ. ಸರ್ಕಾರಿ ಆದೇಶ ಪಾಲಿಸದ ಆಸ್ಪತ್ರೆಗಳಿಗೆ ನೋಟೀಸ್ ನೀಡಿದ್ದೇವೆ. ಮುಂದುವರಿದು ಕೆಪಿಎಂಇ ಕಾಯ್ದೆ ಅನ್ವಯ ಕ್ರಮಕೈಗೊಳ್ಳಲಾಗುವುದು. ಖಾಸಗಿ ಆಸ್ಪತ್ರೆಗಳಿಂದ ಶೇಕಡ 50ರಷ್ಟು ಹಾಸಿಗೆಗಳು ಲಭ್ಯವಾದಲ್ಲಿ ಈಗಿರುವ ಕೊರತೆ ನೀಗಲಿದೆ’ ಎಂದರು.

ADVERTISEMENT

’ಹಾಸಿಗೆ ಇಲ್ಲ ಎಂದು ರೋಗಿಗಳನ್ನು ವಿನಾಕಾರಣ ಕಾಯಿಸುವುದು, ಹೊರ ಕಳುಹಿಸುವುದು, ಒಳರೋಗಿಯಾಗಿ ದಾಖಲಿಸದೇ ಇರುವುದು ಇತ್ಯಾದಿ ದೂರುಗಳು ಬಂದಿವೆ. ಹೀಗಾಗಿ, ಪ್ರತಿ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ‘ಸಹಾಯ ಕೇಂದ್ರ’ ಸ್ಥಾಪಿಸಲಾಗುವುದು. ಒಬ್ಬ ವೈದ್ಯ, ನೋಡಲ್ ಅಧಿಕಾರಿ ಹಾಗು ಸಿಬ್ಬಂದಿ ಇರಲಿದ್ದು, ಬಂದ ರೋಗಿಗಳಿಗೆ ಯಾವುದೇ ಅನಾನುಕೂಲ ಆಗದಂತೆ ನಿಗಾವಹಿಸಲಿದ್ದಾರೆ’ ಎಂದರು.

ಐಎಎಸ್ ಅಧಿಕಾರಿ ಯಶವಂತ್, ಜಂಟಿ ಆಯುಕ್ತ ಎಂ.ರಾಮಕೃಷ್ಣ, ಆರೋಗ್ಯಾಧಿಕಾರಿ ಡಾ.ಸವಿತಾ, ಡಾ.ಸುರೇಶ್ ಹಾಗೂ ಆರೋಗ್ಯ ವೈದ್ಯಾಧಿಕಾರಿ ನಾಗೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.