ADVERTISEMENT

ರಸ್ತೆ ಗುಂಡಿಗಳ ಭರ್ತಿ ವಿಳಂಬಕ್ಕೆ ಆಕ್ಷೇಪ: ಹೈಕೋರ್ಟ್ ಗರಂ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 19:24 IST
Last Updated 23 ಅಕ್ಟೋಬರ್ 2018, 19:24 IST

ಬೆಂಗಳೂರು: ‘ಬೆಂಗಳೂರಿನ ರಸ್ತೆ ಗುಂಡಿಗಳನ್ನು ಭರ್ತಿ ಮಾಡುವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳಿಗೆ ಒಂಚೂರೂ ಕಾಳಜಿಯಿಲ್ಲ, ಅವರ ತಲೆಯಲ್ಲಿ ಸ್ಪಷ್ಟ ಕಾರ್ಯ ಯೋಜನೆಗಳೇ ಇಲ್ಲ’ ಎಂದು ಹೈಕೋರ್ಟ್ ಮತ್ತೆ ಕಿಡಿ ಕಾರಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳ ಭರ್ತಿ ಕುರಿತಂತೆ ಕೋರಮಂಗಲದ ವಿಜಯನ್ ಮೆನನ್ ಸೇರಿದಂತೆ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಎಸ್. ಆರ್.ಅನೂರಾಧ, ‘ಈ ಹಿಂದಿನ ವಿಚಾರಣೆ ವೇಳೆ ಕೋರ್ಟ್ ಗಮನಕ್ಕೆ ತರಲಾಗಿದ್ದ 43 ಗುಂಡಿಗಳ ಭರ್ತಿ ಇನ್ನೂ ಆಗಿಲ್ಲ’ ಎಂದು ನ್ಯಾಯಪೀಠದ ಗಮನ ಸೆಳೆದರು.

ADVERTISEMENT

ಇದಕ್ಕೆ ಗರಂ ಆದ ದಿನೇಶ್ ಮಾಹೇಶ್ವರಿ, ‘ಬಿಬಿಎಂಪಿ ಅಧಿಕಾರಿಗಳಿಗೆ ಸಾರ್ವಜನಿಕ ಕೆಲಸಗಳನ್ನು ಕ್ಷಿಪ್ರಗತಿಯಲ್ಲಿ ಮಾಡಿ ಮುಗಿಸುವ ಸ್ಪಷ್ಟತೆ ಮತ್ತು ನಿಖರತೆಯೇ ಇಲ್ಲ. ಅವರಿಗೆ ನಾಚಿಕೆ ಆಗಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿಯೊಂದು ಗುಂಡಿಯನ್ನೂ ಮುಚ್ಚಿದ್ದೀರಾ ಎಂದು ಕೋರ್ಟೇ ಕೇಳಬೇಕೇ, ಅಧಿಕಾರಿಗಳಿಗೆ ಇನಿತೂ ಗಂಭೀರತೆ ಇಲ್ಲ. ಬರಿ ಕಾಲಹರಣ ಮಾಡುತ್ತಿದ್ದಾರೆ. ಮೈ ಕೊಡವಿಕೊಂಡು ಕೆಲಸ ಮಾಡಬೇಕು‌’ ಎಂದು ಮೌಖಿಕ ಎಚ್ಚರಿಕೆ ನೀಡಿದರು.

‘ಇಂದು (ಅ.23) ಮಧ್ಯಾಹ್ನ 1.30ರ ಒಳಗೆ ಅರ್ಜಿದಾರರು ಹೇಳಿರುವ ಗುಂಡಿಗಳನ್ನು ಭರ್ತಿ ಮಾಡಿ ಕೋರ್ಟ್‌ಗೆ ವರದಿ ಒಪ್ಪಿಸಬೇಕು’ ಎಂದು ಬಿಬಿಎಂಪಿ ಪರ ವಕೀಲ ವಿ‌.ಶ್ರೀನಿಧಿ ಅವರಿಗೆ ಖಡಕ್ ತಾಕೀತು ಮಾಡಿದರು. ಮಧ್ಯಾಹ್ನ ಮತ್ತೆ ಕಲಾಪ ನಡೆದಾಗ ವರದಿ ಒಪ್ಪಿಸಿದ ಶ್ರೀನಿಧಿ 16 ಕಡೆ ಗುಂಡಿ ಮುಚ್ಚಲಾಗಿದೆ. ಉಳಿದೆಡೆ ಜಲಮಂಡಳಿ ಕಾಮಗಾರಿ ನಡೆದಿದೆ’ ಎಂದು ತಿಳಿಸಿದರು.

ಬೆಂಗಳೂರು ಜಲಮಂಡಳಿ ಪರ ಹಾಜರಿದ್ದ ಹಿರಿಯ ವಕೀಲ ಡಿ.ಎಲ್‌.ಎನ್. ರಾವ್ ಅವರು, ‘ಜಲಮಂಡಳಿ ವತಿಯಿಂದ ರಸ್ತೆಗಳ ಇಕ್ಕೆಲದಲ್ಲಿ ಮಾತ್ರ ಗುಂಡಿ ತೋಡಲಾಗುತ್ತದೆ. ಸಾಮಾನ್ಯವಾಗಿ ರಸ್ತೆಯ ಒಂದು ಬದಿ ಕುಡಿಯುವ ನೀರಿನ ಹಾಗೂ ಮತ್ತೊಂದು ಬದಿ ಚರಂಡಿ ಪೈಪ್ ಲೈನ್ ಇರುತ್ತವೆ. ದಶಕಗಳಷ್ಟು ಹಳೆಯದಾದ ಚರಂಡಿ ಪೈಪ್ ಲೈನ್ ಗಳನ್ನು ಬದಲಾಯಿಸಲಾಗುತ್ತಿದೆ. ಆದರೆ, ರಸ್ತೆ ಮಧ್ಯದ ಗುಂಡಿಗಳಿಗೆ ನಾವು
ಜವಾಬ್ದಾರರಲ್ಲ‘ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಗುಂಡಿಗಳಿಗೆ ಬಿಬಿಎಂಪಿಯಷ್ಟೇ ಜಲಮಂಡಳಿಯೂ ಹೊಣೆಗಾರ‘ ಎಂದು ಹೇಳಿತು. ಕೋರ್ಟ್‌ ನೇಮಿಸಿರುವ ಆಯೋಗವು ಕಾಮಗಾರಿ ಪ್ರಗತಿಯನ್ನು ರಾತ್ರಿ ವೇಳೆಯ ಪರಿಶೀಲಿಸಬೇಕು’ ಎಂದೂ ಸೂಚಿಸಿತು. ‘ಈ ಪ್ರಕರಣದ ವಿಚಾರಣೆಯನ್ನು ಇನ್ನು ಮುಂದೆ ಪ್ರತಿ ಶನಿವಾರ ವಿಶೇಷ ಕಲಾಪದ ಮೂಲಕ ನಡೆಸಲಾಗುವುದು’ ಎಂಬ ಇಂಗಿತವನ್ನೂ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದರು.

ಆ್ಯಪ್‌ ಅರಿವಿಲ್ಲ: ‘ಗುಂಡಿ ಭರ್ತಿಗಳ ದೂರು ಸ್ವೀಕರಿಸಲು ರೂಪಿಸಲಾಗಿರುವ ಆ್ಯಪ್ ಹೇಗೆ ಕಾರ್ಯ ನಿರ್ವಹಿಸುತ್ತಿದೆ, ಆ್ಯಪ್ ಮುಖಾಂತರ ದಾಖಲಾದ ದೂರುಗಳ ಪರಿಶೀಲನೆಗೆ ಏನು ಮಾಡಲಾಗುತ್ತಿದೆ, ಎಷ್ಟು ಪ್ರಕರಣ ಬಗೆಹರಿಸಲಾಗಿದೆ ಎಂಬ ಬಗ್ಗೆ ಸಾರ್ವಜನಿಕರಿಗೆ ಅರಿವಿಲ್ಲ‘ ಎಂದು ಅನೂರಾಧ ಆಕ್ಷೇಪಿಸಿದರು.

ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.