ADVERTISEMENT

4 ತಿಂಗಳಿನಿಂದ ಗೌರವಧನ ಇಲ್ಲ: ಅತಿಥಿ ಉಪನ್ಯಾಸಕರ ಕಣ್ಣೀರು

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 19:34 IST
Last Updated 1 ಜುಲೈ 2019, 19:34 IST
   

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ನಾಲ್ಕು ತಿಂಗಳಿಂದ ಬೋಧನೆ ಮಾಡಿರುವ ಹಲವು ಅತಿಥಿ ಉಪನ್ಯಾಸಕರಿಗೆ ಗೌರವಧನ ನೀಡಿಲ್ಲ. ಇದರಿಂದಾಗಿ ಅವರ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ರಸಾಯನ ವಿಜ್ಞಾನ ವಿಭಾಗದಲ್ಲಿ ಇದ್ದ 10 ಮಂದಿ ಅತಿಥಿ ಉಪನ್ಯಾಸಕರಿಗೆ ನಾಲ್ಕು ತಿಂಗಳ ಗೌರವಧನ ನೀಡಿಲ್ಲ. ಈ ಉಪನ್ಯಾಸಕರ ಪೈಕಿ ಒಬ್ಬರು ‘ಪ್ರಜಾವಾಣಿ’ಗೆ ತಮ್ಮ ಗೋಳು ತೋಡಿಕೊಂಡರು.

‘ಫೆಬ್ರುವರಿ 27ರಂದು ಎರಡನೇ ಸೆಮಿಸ್ಟರ್‌ಗೆ ಬೋಧನೆ ಆರಂಭಿಸಿದ್ದೆವು. ಜೂನ್‌ 22ರವರೆಗೂ ಬೋಧನೆ ಮಾಡಿದ್ದೇವೆ. ಆದರೆ, ಗೌರವಧನ ನೀಡಿಯೇ ಇಲ್ಲ. ನನಗೊಬ್ಬನಿಗೆ ಅಲ್ಲ, ವಿಭಾಗದ ಎಲ್ಲ 10 ಮಂದಿಗೂ ಕೊಟ್ಟಿಲ್ಲ. ನನ್ನ ಅಮ್ಮನಿಗೆ ಅಸೌಖ್ಯ ಕಾಡುತ್ತಿದ್ದು, ಔಷಧ ತರುವುದಕ್ಕೂ ದುಡ್ಡಿಲ್ಲ. ಹೀಗಾಗಿ ನಿಮಗೆ ಕರೆ ಮಾಡಿ ನನ್ನ ದುಃಖ ಹೇಳಿಕೊಳ್ಳಬೇಕಾಯಿತು’ ಎಂದು ಉಪನ್ಯಾಸಕರು ಅಳಲು ತೋಡಿಕೊಂಡರು.

ADVERTISEMENT

‘ಯಾಕಾಗಿ ಗೌರವಧನ ತಡೆಹಿಡಿದಿದ್ದಾರೋ ಗೊತ್ತಿಲ್ಲ, ಕುಲಪತಿ ಅಥವಾ ಕುಲಸಚಿವರ ಬಳಿ ಈ ಸಮಸ್ಯೆ ಹೇಳಿಕೊಳ್ಳಲು ಭಯ, ಏಕೆಂದರೆ ಇದೇ ನೆಪ ಹೇಳಿ ಮುಂದಿನ ಬಾರಿ ಕೆಲಸ ಕೊಡದಿದ್ದರೆ ಮತ್ತಷ್ಟು ಸಂಕಷ್ಟ. ಇತರ ಕೆಲವು ವಿಭಾಗಗಳಲ್ಲೂ ಸಹ ಇದೇ ರೀತಿಯ ಸಮಸ್ಯೆ ಆಗಿರುವುದು ನನ್ನ ಗಮನಕ್ಕೆ ಬಂದಿದೆ’ ಎಂದರು.

ಆಡಿಟ್‌ ಸಮಸ್ಯೆ ಇದೆ: ‘ನಿಯಮದ ಪ್ರಕಾರ ಅತಿಥಿ ಉಪನ್ಯಾಸಕರು ಇಂತಿಷ್ಟೇ ಗಂಟೆ ಬೋಧನೆ ಮಾಡಬೇಕೆಂದಿದೆ. ನಿಗದಿತ ಅವಧಿಗಿಂತ ಅಧಿಕ ಬೋಧನೆ ಮಾಡಿದ ಲೆಕ್ಕಾಚಾರ ನೀಡಿದರೆ ಲೆಕ್ಕಪರಿಶೋಧನೆ ವೇಳೆ ತೊಂದರೆ ಉಂಟಾಗುತ್ತದೆ. ಹೀಗಾಗಿ ಮತ್ತೊಮ್ಮೆ ಸರಿಯಾಗಿ ಲೆಕ್ಕ ಮಾಡಿ ಗೌರವಧನ ದೊರಕಿಸಿಕೊಳ್ಳಲು ಹೇಳಿದ್ದೇವೆ. ಅದನ್ನು ತಕ್ಷಣ ಒದಗಿಸುತ್ತೇವೆ’ ಎಂದು ಕುಲಸಚಿವ ಪ್ರೊ.ಎಂ.ರಾಮಚಂದ್ರ ಗೌಡ ತಿಳಿಸಿದರು.

‘ಅತಿಥಿ ಉಪನ್ಯಾಸಕರಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ನಿಯಮದಂತೆ ಅವರು ತಮ್ಮ ಹಾಜರಾತಿ ಸಹಿತ ಸರಿಯಾಗಿ ಲೆಕ್ಕ ನೀಡಿದ್ದೇ ಆದರೆ ಸಮಸ್ಯೆ ಇಲ್ಲ. ತಿದ್ದುಪಡಿಗಾಗಿ ವಾಪಸ್ ಕಳುಹಿಸಿಕೊಟ್ಟಾಗ ಇಂತಹ ವಿಳಂಬ ಆಗಬಹುದು. ಇನ್ನಷ್ಟು ವಿಳಂಬ ಆಗದಂತೆ ಎಚ್ಚರ ವಹಿಸಲಾಗುವುದು’ ಎಂದರು.

*
ಗೌರವಧನ ನೀಡಿಕೆಯಲ್ಲಿ ವಿಶ್ವವಿದ್ಯಾಲಯ ವಿಳಂಬ ಮಾಡುವುದಿಲ್ಲ. ಈ ಬಾರಿ ಹೀಗೇಕೆ ಆಯಿತು ಎಂದು ಪರಿಶೀಲಿಸಿ ನ್ಯಾಯ ಕೊಡಿಸುವೆ
ಪ್ರೊ.ಎಸ್.ಜಾಫೆಟ್‌, ಕುಲಪತಿ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.