ADVERTISEMENT

ಬಿಡಿಎ ಅಧ್ಯಕ್ಷ– ಆಯುಕ್ತರ ನಡುವೆ ಶೀತಲ ಸಮರ

ಭವಾನಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನಿವೇಶನ– ಬಿಡಿಎಯಲ್ಲಿ ಭಿನ್ನಾಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 19:13 IST
Last Updated 9 ಫೆಬ್ರುವರಿ 2021, 19:13 IST
ಬಿಡಿಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎಸ್‌.ಆರ್‌.ವಿಶ್ವನಾಥ್‌ ಅವರನ್ನು ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ್‌ ಅಭಿನಂದಿಸಿದ ಸಂದರ್ಭ
ಬಿಡಿಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎಸ್‌.ಆರ್‌.ವಿಶ್ವನಾಥ್‌ ಅವರನ್ನು ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ್‌ ಅಭಿನಂದಿಸಿದ ಸಂದರ್ಭ   

ಬೆಂಗಳೂರು: ಭವಾನಿ ಗೃಹನಿರ್ಮಾಣ ಸಹಕಾರ ಸಂಘಕ್ಕೆ ನಿವೇಶನಗಳನ್ನು ಹಂಚಿಕೆ ಮಾಡುವ ವಿಚಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್ ಹಾಗೂ ಆಯುಕ್ತ ಎಚ್‌.ಆರ್‌.ಮಹದೇವ ನಡುವೆ ಶೀತಲಸಮರಕ್ಕೆ ಕಾರಣವಾಗಿದೆ.

ಭವಾನಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಜಾಗ ಖರೀದಿಗೆ ಈ ಹಿಂದೆ ಸರ್ಕಾರ ಒಪ್ಪಿಗೆ ನೀಡಿತ್ತು. ಈ ಸಂಘವು ಖರೀದಿಸಿದ್ದ 32 ಎಕರೆಯನ್ನು ಬನಶಂಕರಿ ಬಡಾವಣೆ ಅಭಿವೃದ್ಧಿಗೆ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಅಭಿವೃದ್ಧಿಪಡಿಸಿದ ನಿವೇಶನ ನೀಡುವ ವಾಗ್ದಾನ ನೀಡಿತ್ತು. ಆದರೆ, ಸಂಘಕ್ಕೆ ಬಿಡಿಎ ಇದುವರೆಗೂ ನಿವೇಶನ ಹಂಚಿಕೆ ಮಾಡಿರಲಿಲ್ಲ. ಈ ಬಗ್ಗೆ ಸಂಘವು ನ್ಯಾಯಾಲಯದ ಮೊರೆ ಹೋಗಿತ್ತು. ಈ ಸಹಕಾರ ಸಂಘಕ್ಕೆ 12 ಎಕರೆ 36 ಗುಂಟೆ ಬದಲಿ ಜಾಗ ನೀಡಲು ಹಾಗೂ ಮಾರುಕಟ್ಟೆ ಮೌಲ್ಯವನ್ನು ಕಟ್ಟಿಸಿಕೊಂಡು ಕೆಂಪೇಗೌಡ ಬಡಾವಣೆಯಲ್ಲಿ 7 ಎಕರೆ ನಿವೇಶನ ನೀಡಲು 2019 ರ ಫೆಬ್ರುವರಿ 26 ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ADVERTISEMENT

‘ಕೆಲವು ಗೃಹನಿರ್ಮಾಣ ಸಹಕಾರಗಳು ಜನರಿಂದ ದುಡ್ಡುಕಟ್ಟಿಸಿಕೊಂಡು ವಂಚಿಸಿದ ಆರೋಪಗಳಿವೆ. ಹಾಗಾಗಿ ಇನ್ನು ಯಾವುದೇ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ನಿವೇಶನಗಳನ್ನು ಮಂಜೂರು ಮಾಡಬಾರದು’ ಎಂದು ಎಸ್‌.ಆರ್‌.ವಿಶ್ವನಾಥ್‌ ಅವರು ಆಯುಕ್ತರಿಗೆ ಸೂಚನೆ ನೀಡಿದ್ದರು. 2021ರ ಜ.1 ಮತ್ತು 21 ರಂದು ಲಿಖಿತ ರೂಪದಲ್ಲಿ ನಿರ್ದೇಶನವನ್ನೂ ನೀಡಿದ್ದರು. ಇದಕ್ಕೊಪ್ಪದ ಆಯುಕ್ತರುಸಂಘಕ್ಕೆ ನೀಡಲು ಬಾಕಿ ಇರುವ ಭೂಮಿ ನೀಡಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಹದೇವ, ‘ನಾವು ಸರ್ಕಾರ, ಆಡಳಿತ ಮಂಡಳಿ ಹಾಗೂ ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಿದ್ದೇವೆ. ಆಡಳಿತ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಇದುವರೆಗೂ ರದ್ದು ಪಡಿಸಿಲ್ಲ. ನ್ಯಾಯಾಲಯದ ಆದೇಶವೂ ಇರುವುದರಿಂದ ಭವಾನಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಜಾಗ ನೀಡಲೇ ಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.