ಬೆಂಗಳೂರು: ‘ಶಿವರಾಮ ಕಾರಂತ ಬಡಾವಣೆ ಸುಪ್ರೀಂ ಕೋರ್ಟ್ ಮಾರ್ಗದರ್ಶನದಲ್ಲಿ ನಿರ್ಮಾಣವಾಗುತ್ತಿದ್ದು, ಬಿಡಿಎ ಸುಮಾರು ₹7 ಸಾವಿರ ಕೋಟಿ ಹೂಡಿಕೆ ಮಾಡಿದೆ. ಈವರೆಗೆ ಒಂದು ನಿವೇಶನ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಬಿಡಿಎಗೆ ಪ್ರತಿ ವರ್ಷ ₹1 ಸಾವಿರ ಕೋಟಿ ನಷ್ಟವಾಗುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
‘ನಿವೇಶನ ನೀಡಲು ಅರ್ಜಿ ಸಲ್ಲಿಕೆಗೂ ಹೈಕೋರ್ಟ್ ತಡೆ ನೀಡಿರುವುದರಿಂದ ಸಮಸ್ಯೆಯಾಗಿದೆ. ಅದನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಭೂಸ್ವಾಧೀನದ ಅಧಿಸೂಚನೆಯಾಗಿ 15 ವರ್ಷವಾಗಿದ್ದು, ರೈತರಿಗೆ ಹಣ ಪಾವತಿಸಲು, ನಿವೇಶನ ನೀಡಲು ಸಾಧ್ಯವಾಗುತ್ತಿಲ್ಲ. ಯಾವುದಾದರೂ ಪ್ರಕ್ರಿಯೆಯಲ್ಲಿ ಸಮಸ್ಯೆ ಇದ್ದರೆ ದೂರು ಕೊಡಿ, ಪರಿಹರಿಸೋಣ’ ಎಂದು ಜವರಾಯಿಗೌಡ ಅವರಿಗೆ ತಿಳಿಸಿದರು.
‘52.60 ಕಿ.ಮೀ ಉದ್ದದ ಪಿಆರ್ಆರ್–2 ರಸ್ತೆ ನಿರ್ಮಿಸ ಲಾಗುತ್ತಿದ್ದು, 10.77 ಕಿ.ಮೀ. ಕಾಮಗಾರಿ ಮುಗಿದಿದೆ. ಪ್ರಾಥಮಿಕ ಅಧಿಸೂಚನೆ 2005ರ ಡಿಸೆಂಬರ್ 12ರಂದು ಆಗಿದ್ದು, ಡಿನೋಟಿಫೈ ಮಾಡುವ ಪ್ರಶ್ನೆಯೇ ಇಲ್ಲ. ಡಿನೋಟಿಫೈ ಮಾಡಿ ಜೈಲಿಗೆ ಹೋಗಲು ಸಿದ್ಧನಿಲ್ಲ.ರೈತರೊಂದಿಗೆ ಸಮಾಲೋಚನೆ ನಡೆಸಿ, ಪರಿಹಾರ ನೀಡಿ ರಸ್ತೆ ನಿರ್ಮಿಸಲಾಗುತ್ತದೆ’ ಎಂದು ಎಚ್.ಎಸ್. ಗೋಪಿನಾಥ್ ಅವರ ಪ್ರಶ್ನೆಗೆ ಶಿವಕುಮಾರ್ ಉತ್ತರಿಸಿದರು.
‘ಕೆಂಪೇಗೌಡ ಬಡಾವಣೆಯಲ್ಲಿ ಯಾವ ಅಧಿಕಾರಿ ಹಣ ಪಡೆದಿದ್ದಾನೆ ಹೇಳಿ, ಹೊತ್ತು ಮುಳುಗುವುದರಲ್ಲಿ ಅಮಾನತು ಮಾಡುತ್ತೇನೆ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನ ಪರಿಷತ್ನಲ್ಲಿ ಜೆಡಿಎಸ್ನ ಜವರಾಯಿಗೌಡ ಅವರು, ‘ರೈತರು ತಮ್ಮ ಜಮೀನು ಉಳಿಸಿಕೊಳ್ಳಲು ಎಕರೆಗೆ ಹತ್ತು ಗುಂಟೆ ಕಳೆದುಕೊಳ್ಳುತ್ತಿದ್ದಾರೆ. ಬಿಡಿಎ ಅಧಿಕಾರಿಗಳು ಕೋಟ್ಯಂತರ ಹಣ ಪಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.
‘ಜವರೇಗೌಡರು ಅನೇಕ ಆರೋಪ ಮಾಡಿದ್ದಾರೆ. ಇಂತಹ ಪ್ರಕರಣ ನಡೆಯುತ್ತಿದ್ದರೆ, ಯಾರು, ಯಾರಿಗೆ ಹಣ ನೀಡಿದ್ದಾರೆ ಎಂದು ರೈತರಿಂದ ದೂರು ಕೊಡಿಸಿ. ಅಂತಹ ಅಧಿಕಾರಿಯನ್ನು ಅಮಾನತು ಮಾಡುತ್ತೇನೆ. ಆಮೇಲೆ ತನಿಖೆ ನಡೆಸಲಾಗುವುದು. ನನ್ನ ಜೊತೆ ಒಂದು ಕಾಫಿ ಕುಡಿದು ಮಾಹಿತಿ ಕೊಡಿ, ರೈತರ ಸಮಸ್ಯೆ ಬಗೆಹರಿಸೋಣ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.