ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಚೇರಿ ಆವರಣದಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದ ಮೂವರು ದಲ್ಲಾಳಿಗಳ ಪೈಕಿ ಇಬ್ಬರನ್ನು ಶನಿವಾರ ಬಂಧಿಸಲಾಗಿದೆ.
ನಿವೇಶನ ಹಂಚಿಕೆ, ಬದಲಿ ನಿವೇಶನಗಳ ಮಂಜೂರಾತಿ, ಭೂಮಾಲೀಕರಿಗೆ ಪರಿಹಾರ ನೀಡುವಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿರುವ ದೂರುಗಳನ್ನು ಆಧರಿಸಿ ಶುಕ್ರವಾರ ಮಧ್ಯಾಹ್ನ ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿಮಾಡಿದ್ದ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದರು. ಆಗ ಕಚೇರಿ ಆವರಣದಲ್ಲಿದ್ದ ಅನಿಲ್ ಕುಮಾರ್, ಮಂಜಪ್ಪ
ಮತ್ತು ಆದಿನಾರಾಯಣ ಎಂಬ ದಲ್ಲಾಳಿಗಳನ್ನು ತನಿಖಾ ತಂಡ ವಶಕ್ಕೆ ಪಡೆದಿತ್ತು.
‘ಮೂವರನ್ನೂ ತೀವ್ರವಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ಆದಿನಾರಾಯಣ ಸ್ವಂತ ಕೆಲಸಕ್ಕಾಗಿ ಬಿಡಿಎ ಕಚೇರಿಗೆ ಬಂದಿರುವುದಾಗಿ ಕೆಲವು ದಾಖಲೆಗಳನ್ನು ಒದಗಿಸಿದರು. ಈ ಕಾರಣದಿಂದ ಅವರನ್ನು ಬಂಧಿಸಿಲ್ಲ. ಅನಿಲ್ ಕುಮಾರ್ ಮತ್ತು ಮಂಜಪ್ಪ, ದಲ್ಲಾಳಿ ಕೆಲಸಕ್ಕಾಗಿಯೇ ಅಲ್ಲಿದ್ದುದಕ್ಕೆ ಸಾಕ್ಷ್ಯಗಳು ದೊರಕಿವೆ. ಇಬ್ಬರನ್ನೂ ಬಂಧಿಸಿ ಶನಿವಾರ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ನ್ಯಾಯಾಧೀಶರ ಆದೇಶದಂತೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಲೋಕಾಯುಕ್ತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಲೋಕಾಯುಕ್ತದ ಅಧಿಕಾರಿಗಳ ವಿರುದ್ಧ 12 ದೂರು
ಬೆಂಗಳೂರು: ಲೋಕಾಯುಕ್ತದ ಅಧಿಕಾರಿಗಳ ವಿರುದ್ಧವೇ ಸಂಸ್ಥೆಗೆ 12 ದೂರುಗಳು ಸಲ್ಲಿಕೆಯಾಗಿವೆ. ಹೆಚ್ಚಿನ ದೂರುಗಳು ಕರ್ತವ್ಯಲೋಪ ಹಾಗೂ ತನಿಖೆಯಲ್ಲಿ ಲೋಪಗಳ ಆರೋಪಗಳನ್ನು ಒಳಗೊಂಡಿವೆ.
ಈ ಹಿಂದೆ ಅಸ್ತಿತ್ವದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳದಲ್ಲಿದ್ದ (ಎಸಿಬಿ) ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ದಾಖಲಾಗಿದ್ದ 32 ದೂರುಗಳೂ ಬಾಕಿ ಇವೆ.
‘ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧದ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ದೂರುಗಳ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಕೆಲವರು ಗಾಳಿಯಲ್ಲಿ ಗುಂಡು ಹೊಡೆದಂತೆ ಆಧಾರರಹಿತ ದೂರು ಸಲ್ಲಿಸುವುದೂ ಇದೆ. ಅಂತಹ ಪ್ರಕರಣಗಳಲ್ಲಿ ಕ್ರಮ ಅಸಾಧ್ಯ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.