ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಾಜಕಾಲುವೆಯ ಮೀಸಲು ಪ್ರದೇಶ, ಹೈ ಟೆನ್ಷನ್ ವಿದ್ಯುತ್ ಮಾರ್ಗ ಹಾದುಹೋಗಿರುವ ಕಡೆಯೇ ನಿವೇಶನಗಳನ್ನು ನಿರ್ಮಿಸಿರುವುದನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಪ್ಪಿಕೊಂಡಿದೆ.
ನಿವೇಶನದಾರರಿಗೆ ಆಗಿರುವ ತೊಂದರೆಗಳಿಗಾಗಿ ಪ್ರಾಧಿಕಾರವು ವಿಷಾದ ವ್ಯಕ್ತಪಡಿಸಿದೆ.
‘ಇಂತಹ ಅನೇಕ ನ್ಯೂನತೆಗಳು ಪ್ರಾಧಿಕಾರದ ಗಮನಕ್ಕೆ ಬಂದಿವೆ. ಇವುಗಳನ್ನು ಪರಿಶೀಲಿಸುತ್ತೇವೆ. ತಪ್ಪುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ಒಟ್ಟು 4,971 ನಿವೇಶನಗಳನ್ನು ಬಿಡಿಎ ಇತ್ತೀಚಿಗೆ ಹಂಚಿಕೆ ಮಾಡಿತ್ತು. 400 ಕೆ.ವಿ ಹೈಟೆನ್ಷನ್ ವಿದ್ಯುತ್ ಮಾರ್ಗ ಹಾದು ಹೋಗಿರುವ ಕಡೆ ಹಾಗೂ ರಾಜಕಾಲುವೆಯ ಮೀಸಲು ಪ್ರದೇಶಗಳಲ್ಲೇ ನಿವೇಶನಗಳನ್ನು ನಿರ್ಮಿಸಿರುವ ಬಗ್ಗೆ ‘ಪ್ರಜಾವಾಣಿ’ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಎರಡು ವರ್ಷಗಳ ಹಿಂದೆ ಹಂಚಿಕೆ ಮಾಡಿದ ನಿವೇಶನಗಳಿಗೆ ಮೂಲಸೌಕರ್ಯ ಕಲ್ಪಿಸದ ಬಗ್ಗೆ ಹಾಗೂ ವಿವಾದಿತ ಜಮೀನುಗಳಲ್ಲಿ ನಿವೇಶನ ನಿರ್ಮಿಸಿರುವ ಬಗ್ಗೆಯೂ ಪತ್ರಿಕೆ ಗಮನ ಸೆಳೆದಿತ್ತು.
‘ಫಲಾನುಭವಿಗಳಿಗೆ ಹಂಚಿಕೆ ಪತ್ರಗಳನ್ನು ಕಳುಹಿಸಲಾಗುತ್ತಿದೆ’ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.